ವರದಿ ಕೃಪೆ: ಚರಣ್ ಕೇಕಡ
ವೀಳ್ಯೆದೆಲೆಗೆ ಭಾರತೀಯ ಸಂಪ್ರದಾಯದಲ್ಲಿ ಅತಿ ಹೆಚ್ಚಿನ ಮಹತ್ವವಿದೆ. ಶುಭ ಕಾರ್ಯಗಳಿಂದ ಹಿಡಿದು ಎಲ್ಲಾ ರೀತಿಯ ಸಮಾರಂಭಗಳಲ್ಲೂ ವೀಳ್ಯದೆಲೆ ಬಳಕೆ ಕಡ್ಡಾಯವಾಗಿ ಇರುತ್ತದೆ.
ದೇವರ ಪೂಜೆಯ ಜೊತೆಗೆ ತಾಂಬೂಲಕ್ಕೂ ವೀಳ್ಯದೆಲೆಯನ್ನು ಬಳಸುತ್ತೇವೆ. ಅಡಿಕೆ ಸುಣ್ಣ ಹಾಕಿ ತಿನ್ನುವ ವೀಳ್ಯದೆಲೆಯಿಂದ ಅತಿ ಹೆಚ್ಚಿನ ಉಪಯೋಗಗಳು
ದೊರೆಯುತ್ತವೆ.
ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ವೀಳ್ಯದೆಲೆ ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ.
ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ
ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
ಪುಟ್ಟ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಉಂಟಾಗಿ ಅಳುತ್ತಿದ್ದರೆ, ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ.
ಮಕ್ಕಳಲ್ಲಿ ನೆಗಡಿ, ಕೆಮ್ಮು, ಕಫ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀರಸ, ದೊಡ್ಡಪತ್ರೆಯ ರಸ ಬೆರೆಸಿ, ಜೇನು ತುಪ್ಪ ಸೇರಿಸಿ ನೀಡಿದರೆ ಶೀಘ್ರ ಗುಣವಾಗುತ್ತದೆ.
ಅಸ್ತಮಾ, ಕೆಮ್ಮು, ಕಫದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ
ಸೇವಿಸಿದರೆ ತುಂಬಾ ಪರಿಣಾಮಕಾರಿ.
2 ಕಪ್ ಕೊಬ್ಬರಿ ಎಣ್ಣೆಗೆ ಅರ್ಧ ಕಪ್ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟು ಉದುರುವುದು, ಕೂದಲು ಉದುರುವುದು ನಿವಾರಣೆಯಾಗುತ್ತದೆ.
ವೀಳ್ಯದ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.
2 ವೀಳ್ಯದೆಲೆಯಲ್ಲಿ 4-6 ಲವಂಗವನ್ನಿಟ್ಟು ಜಗಿದು ತಿಂದರೆ ಅಜೀರ್ಣ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ.
ತೀವ್ರವಾದ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಬೇಕು. ಹಲ್ಲುನೋವು,
ವಸಡುನೋವು ಕಡಿಮೆಯಾಗುತ್ತದೆ.
ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಯಾಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ
ಶಮನಕಾರಿ.
ಗಾಯ ಉಂಟಾದಾಗ, ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ಗುಣಕಾರಿ.ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.
ವೀಳ್ಯದೆಲೆ ‘ಕೊಲೆಸ್ಟ್ರಾಲ್’ಮತ್ತು ಗಂಟಲಿನಲ್ಲಿನ ಅಂಟು ಕಫವನ್ನು ತೆಗೆದುಹಾಕುತ್ತದೆ. ಅನ್ನಜೀರ್ಣವಾಗಲು ಬೇಕಾಗುವ ನಾರುಮಯ ಹಾಗೂ ಗೆರೆಗಳಿರುವ ಪದಾರ್ಥವು ಈ ಎಲೆಯಿಂದ ಸಿಗುತ್ತದೆ. ಎಲೆಯಲ್ಲಿನ ಕ್ಷಾರತನವು ಜಂತುಗಳನ್ನು ನಾಶಪಡಿಸುತ್ತದೆ.
