ಬೆಂಗಳೂರು: ನಾನು ಆರೋಗ್ಯವಾಗಿದ್ದೇನೆ. ಒಂದು ವಾರದ ನಂತರ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸೆಂಚುರಿ ಸ್ಟಾರ್ ಡಾ.ಶಿವರಾಜ್ಕುಮಾರ್ ತಿಳಿಸಿದ್ದಾರೆ.
ಅನಾರೋಗ್ಯದಿಂದಾಗಿ ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಗಳ ಮದುವೆ ಓಡಾಟದಿಂದ ಬಳಲಿದ್ದೆ. ನಂತರವೂ ವಿಶ್ರಾಂತಿ ಪಡೆಯದೆ ಶೂಟಿಂಗ್ಗಾಗಿ ಚಿಕ್ಕಮಗಳೂರಿಗೆ ತೆರಳಿದ್ದು ನಂತರ ಚೆನ್ನೈಗೆ ಹೋಗಿದ್ದೆ ಎಂದಿದ್ದಾರೆ. ಹಲವು ದಿನಗಳಿಂದ ಜಿಮ್ನಲ್ಲಿ ವರ್ಕೌಟ್ ಮಾಡಿರಲಿಲ್ಲ. ಮತ್ತೆ ಜಿಮ್ನಲ್ಲಿ ತೊಡಗಿದಾಗ ಆಗಾಗ ಎಡಭುಜದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ವಿಶ್ರಾಂತಿ ಇಲ್ಲದಿದ್ದರಿಂದ ಎದೆ ನೋವು ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.
ಆರೋಗ್ಯ ಚೆನ್ನಾಗಿದೆ: ನಟ ಶಿವರಾಜ್ಕುಮಾರ್ ಅವರ ಆರೋಗ್ಯ ಚೆನ್ನಾಗಿದೆ. ಅವರ ಬಿಪಿ, ಇಸಿಜಿ ಎಲ್ಲವೂ ಸರಿಯಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಹೃದಯ ತಜ್ಞ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.
ಒಂದು ವಾರಗಳ ಕಾಲ ಶಿವರಾಜ್ಕುಮಾರ್ ಅವರಿಗೆ ಮಾನಸಿಕ ಹಾಗೂ ದೈಹಿಕ ವಿಶ್ರಾಂತಿ ಬೇಕಿದೆ ಎಂದು ಹೇಳಿದ್ದಾರೆ.