ಮಂಗಳೂರು / ವಿಟ್ಲ : ವಿಟ್ಲದಲ್ಲಿ ನಡೆದ ದರೋಡೆ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಒಂದೇ ಗಂಟೆಯಲ್ಲಿ ಭೇದಿಸುವಲ್ಲಿ ಉಳ್ಳಾಲ ಹಾಗೂ ಕೊಣಾಜೆ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಟ್ಲದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಪಿಸ್ತೂಲ್ ತೋರಿಸಿ 4.10 ಲಕ್ಷ ರೂಪಾಯಿ ದರೋಡೆ ಮಾಡಿದ್ದವರನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಪೊಲೀಸರು ಕೊಣಾಜೆಯಲ್ಲಿ ಬಂಧಿಸಿದ್ದಾರೆ ಎಂದು ದ.ಕ.ಜಿಲ್ಲಾ ಎಸ್ಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಮಕೃಷ್ಣ, ಸುಜಿತ್ ಭಂಡಾರಿ, ಶ್ರೇಯಾಂಶ ಜೈನ್, ಮಂಜುನಾಥ್, ನಾಗೇಶ್ ಹಾಗೂ ಅಮಲ್ ರಾಜ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ದರೋಡೆಗೈಯ್ಯಲು ಬಳಸಿದ್ದ ಪಿಸ್ತೂಲ್, ಟಾಟಾ ಸುಮೋ ಹಾಗೂ ಹಣವನ್ನು ವಷಕ್ಕೆ ತೆಗೆದು ಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಪಿಗಳು ಸೋಮವಾರ ರಾತ್ರಿ ವಿಟ್ಲ ಶ್ರೀನಿವಾಸ್ ಟ್ರೇಡರ್ಸ್ ಮಾಲಕ ಸುಭಾಶ್ಚಂದ್ರ ನಾಯಕ್ ಅವರು ಎಂದಿನಂತೆ ವ್ಯಾಪಾರ ಮುಗಿಸಿ, ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದಾಗ ಕಾರನ್ನು ತಡೆದು ನಿಲ್ಲಿಸಿ ಪಿಸ್ತೂಲ್ ತೋರಿಸಿ ನಗದು ಬ್ಯಾಗ್ ಅಪಹರಿಸಿ ಟಾಟಾ ಸುಮೋ ಕಾರಿನಲ್ಲಿ ಪರಾರಿಯಾಗಿದ್ದರು ಎಂದರು.
ಘಟನೆ ವಿವರ:
ಸುಭಾಶ್ಚಂದ್ರ ನಾಯಕ್ ವಿಟ್ಲ ಪೇಟೆಯಲ್ಲಿರುವ ತನ್ನ ಜಿನಸು ಅಂಗಡಿಯ ವ್ಯಾಪಾರ ಮುಗಿಸಿ ರಾತ್ರಿ 8:15 ಕ್ಕೆ ಮನೆಗೆ ತೆರಳುತ್ತಿದ್ದ ವೇಳೆ ಟಾಟಾ ಸುಮೋದಲ್ಲಿ ಬಂದ 5 ಜನ ದರೋಡೆಕೊರರು, ಇವರ ಕಾರನ್ನು ಅಡ್ಡಗಟ್ಟಿ “ನಮ್ಮ ಕಾರಿಗೆ ಡಿಕ್ಕಿಯಾಗಿದೆ, ಕಣ್ಣು ಕಾಣುವುದಿಲ್ಲವೇ ನಿನಗೆ” ಎಂದು ಹೇಳಿ ಪಿಸ್ತೂಲಿನಂತಿದ್ದ ಆಯುಧ ಇವರ ಎದೆಗೆ ಗುರಿ ಇಟ್ಟು ಕಾರಿನ ಮುಂಭಾಗದಲ್ಲಿ ರೂ 4,10,700 ಹಣವಿದ್ದ ಬ್ಯಾಗನ್ನು ದೋಚಿ ಪರಾರಿಯಾಗಿರುತ್ತಾರೆ.
ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ, ಕಾರ್ಯಪ್ರವರ್ತರಾದ ಬಂಟ್ವಾಳ ಗ್ರಾಮಾಂತರ ಠಾಣಾ ಪಿ ಎಸ್ ಐ ಹಾಗೂ ಸಿಬ್ಬಂದಿಗಳು ವಾಹನವನ್ನು ಬೆನ್ನಟ್ಟಿದ್ದರು. ಅದೇ ಸಮಯಕ್ಕೆ ಜಿಲ್ಲಾ ಕಂಟ್ರೋಲ್ ರೂಂ ನವರು ವಯಲೆಸ್ಸ್ ಮೂಲಕ ಎಲ್ಲಾ ಠಾಣೆಗಳಿಗೆ ಸಂದೇಶ ರವಾನಿಸಿದ್ದರು.
ಸಂದೇಶ ಸಿಕ್ಕಿದ ಕೂಡಲೇ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿ ಪಿ ಎಸ್ ಐ ಭಾರತಿಯವರು ದರೋಡೆಕೊರರ ವಾಹನವನ್ನು ಕೋಣಾಜೆಯಲ್ಲಿ ಆಡ್ಡ ಹಾಕಿ ಐವರು ದರೋಡೆಕೋರಾದ ರಾಮ ಕೃಷ್ಣ, ಸುಜೀತ್ ಭಂಡಾರಿ, ಶ್ರೇಯಾಂಕ್ ಜೈನ್, ಮಂಜುನಾಥ್, ನಾಗೆಶಪ್ಪ, ಅಮಲ್ ರಾಜ್ ಎಂಬ ಆರೋಪಿಗಳನ್ನು ದರೋಡೆ ನಡೆದ ಒಂದೇ ಗಂಟೆಯೊಳಗೆ ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ಎಸ್ಪಿ ವಿವರಿಸಿದರು.
ಘಟನೆ ನಡೆದ ಒಂದು ಗಂಟೆಯೊಳಗೆ ಯಶಸ್ವಿ ಕಾರ್ಯಾಚರಣೆ ಮೂಲಕ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸಿದ ಎಸ್ಪಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.







