ಮೂಲ್ಕಿ: ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಜನಪ್ರಿಯಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದ ಪೊಯ್ಯೊಟ್ಟು ಸದಾಶಿವ ಸಾಲಿಯಾನ್ (62) ಅವರು ಗುರುವಾರ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕಂಬಳ ಕ್ಷೇತ್ರದ ಅವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಸದಾಶಿವ ಸಾಲಿಯಾನ್ ಅವರು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದರು. ಪೊಯ್ಯೊಟ್ಟು ಸದಾಶಿವ ಸಾಲಿಯಾನ್ ಅವರು ತಮ್ಮ ಕಂಬಳದ ಕೋಣ ನಾಗರಾಜನ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದವರು. ಸುಮಾರು 20 ವರ್ಷಗಳ ಕಾಲ ನಾಗರಾಜ ಸದಾಶಿವ ಸಾಲಿಯಾನ್ ಅವರಿಗೆ ಸುಮಾರು 115 ಪಾರಿತೋಷಕಗಳನ್ನು ಗೆದ್ದುಕೊಟ್ಟಿತ್ತು ಎನ್ನುವುದು ವಿಶೇಷ.
ಕಂಬಳವನ್ನು ನಿಷೇಧಿಸಬೇಕು ಎಂದು ಕೂಗು ಕೇಳಿ ಬಂದಾಗ ಅದರ ವಿರುದ್ಧ ಧ್ವನಿ ಎತ್ತಿ ಕಂಬಳದ ಕೋಣಗಳ ಯಜಮಾನರನ್ನು, ಕಂಬಳ ಪ್ರಿಯರನ್ನು ಸಂಘಟಿಸಿ ಹೋರಾಟ ಮಾಡಿ ಕಂಬಳ ನಿಲ್ಲದಂತೆ ಮಾಡುವಲ್ಲಿ ಸದಾಶಿವ ಸಾಲಿಯಾನ್ ಅವರ ಪಾತ್ರ ಮುಖ್ಯವಾಗಿತ್ತು. ಎಲ್ಲೇ ಕಂಬಳ ನಡೆದರು ಖುದ್ದು ಹಾಜರಾಗುತ್ತಿದ್ದ ಸದಾಶಿವ ಸಾಲಿಯಾನ್ ಅಪರಿಮಿತ ಕಂಬಳ ಪ್ರೇಮಿಯೆನಿಸಿಕೊಂಡಿದ್ದರು.
ಸದಾಶಿವ ಸಾಲಿಯಾನ್ ಅವರ ನಿಧನಕ್ಕೆ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ, ಅವರ ಅಂತ್ಯ ಸಂಸ್ಕಾರ ಶುಕ್ರವಾರ ಬೆಳಿಗ್ಗೆ 10 ಗಂತೆಟೆ ಜರಗಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.