ಬೆಂಗಳೂರು, ಸೆ.29- ಪುರಾತನ ಕಾಲದ ವಿಗ್ರಹ ಹಾಗೂ ವಜ್ರ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸಿ 10 ಲಕ್ಷ ರೂ. ಬೆಲೆಬಾಳುವ ಬುದ್ಧನ ವಿಗ್ರಹ ಹಾಗೂ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ವಿನಯ್ಕುಮಾರ್, ದಾದಾಫೀರ್, ಪ್ರಾಣೇಶ್ ಶೆಟ್ಟಿ, ಮಹಮ್ಮದ್ ದಾದಾಪೀರ್, ಬೆಂಗಳೂರಿನ ರಘು ಪ್ರಸಾದ್, ನರಸಿಂಹ, ತುಮಕೂರು ಜಿಲ್ಲೆಯ ವೆಂಕಟೇಶ್ಕುಮಾರ್, ಶಿವಮೊಗ್ಗದ ಪ್ರಕಾಶ್, ಮಂಡ್ಯದ ಅಭಿಷೇಕ್ ಬಂಧಿತ ವಂಚಕರು. ಆರೋಪಿಗಳಿಂದ 8 ರಿಂದ 10 ಲಕ್ಷ ಬೆಲೆಬಾಳುವ ಪುರಾತನ ಕಾಲದ ಒಂದು ಅಡಿ ಎತ್ತರದ ಬುದ್ಧನ ವಿಗ್ರಹ, ಒಂದು ವಜ್ರದ ಹರಳು, ಒಂದು ವಜ್ರದ ಕಲ್ಲು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಬಿಳಿ ಬಣ್ಣದ ಫೋರ್ಡ್ ಪಿಯಸ್ಟಾ ಕಾರನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಪುರಾತನ ಕಾಲದ ಬುದ್ಧನ ವಿಗ್ರಹ ಹಾಗೂ ವಜ್ರಗಳನ್ನು ಬೇರೆಡೆ ಕಳ್ಳತನ ಮಾಡಿಕೊಂಡು ಬಂದು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿ ದಾದಾಫೀರ್ ವಿರುದ್ಧ 2013ನೆ ಸಾಲಿನಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ವಿಗ್ರಹ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮತ್ತೊಬ್ಬ ಆರೋಪಿ ಪ್ರಾಣೇಶ್ಶೆಟ್ಟಿ ವಿರುದ್ಧ ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ವಿಗ್ರಹ ಮಾರಾಟ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.