ಸಿಂಗಾಪುರ: ತಮಿಳು ಮೂಲದ ಸಿಂಗಾಪುರ ನಿವಾಸಿಯಾಗಿರುವ ಎನ್ ಷಣ್ಮುಗ ಸುಂದರಂ ಅವರು ಕಾರ್ಯನಿರ್ವಾಹಕ ನಿರ್ಮಾಪಕರಾಗಿ ನಿರ್ಮಿಸಿರುವ ಸಿಂಗಾಪುರ ನಿರ್ಮಿತ ” ಉನಕ್ಕೇನ ವೇಣುಂ ಸೊಲ್ಲು’ (ನಿನಗೇನು ಬೇಕೆಂದು ನನಗೆ ಹೇಳು) ಎಂಬ ತಮಿಳು ಚಿತ್ರವು ಇದೇ ಮೊದಲ ಬಾರಿಗೆ ಮೈಸೂರು, ಚೆನ್ನೈ ಮತ್ತು ಕೇರಳದಲ್ಲಿ ಇಂದು ತೆರೆ ಕಾಣಲಿದೆ. ಇದೇ ವೇಳೆ ಈ ಚಿತ್ರ ಭಾರತದಲ್ಲಿ ಒಟ್ಟು 150 ಬೆಳ್ಳಿತೆರೆಗಳಲ್ಲಿ ಪ್ರದರ್ಶನ ಕಾಣಲಿದೆ.
ಆಂಧ್ರಪ್ರದೇಶದಲ್ಲಿ ತೆಲುಗು ಭಾಷೆಗೂ ಡಬ್ ಆಗಿ ಬಿಡುಗಡೆಗೊಳ್ಳುವ ಈ ಚಿತ್ರವು ತಂದೆ ಮತ್ತು ಮಗಳ ಸಂಬಂಧವನ್ನು ಒಳಗೊಂಡು ಹಾರರ್ ಕಥಾ ಚಿತ್ರವಾಗಿದೆ.
ಈ ಚಿತ್ರವನ್ನು ಸುಂದರಂ ಅವರ ಪಾಲುದಾರರಾಗಿರುವ ಶ್ರೀಲಂಕೆಯ ತಮಿಳಿಗ ಶ್ರೀನಾಥ್ ರಾಮಲಿಂಗಂ ಅವರು ನಿರ್ದೇಶಿಸಿದ್ದಾರೆ. ಸುಂದರಂ ಅವರು ರಾಮಲಿಂಗಂ ಅವರನ್ನು ಕ್ಯಾಲಿಫೋರ್ನಿಯಾದ ಫಿಲಂ ಸ್ಕೂಲ್ನಲ್ಲಿ ಭೇಟಿಯಾಗಿದ್ದರು.
ಸಿಂಗಾಪುರದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಚೆನ್ನೈನಲ್ಲೂ ಕಳೆದ ವರ್ಷ ಜುಲೈ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆದಿತ್ತು. ಈ ಚಿತ್ರದಲ್ಲಿ ಭಾರತಿಯರಾದ ದೀಪಕ್ ಪರಮೇಶ್ ಮತ್ತು ಜ್ಯಾಕ್ಲೀನ್ ಪ್ರಕಾಶ್ ಹಾಗೂ ಸಿಂಗಾಪುರದ ಗುಣಲನ್ ಮಾರ್ಗನ್ ನಟಿಸಿದ್ದಾರೆ.
ಪ್ರಖ್ಯಾತ ತಾರೆಯರಿಲ್ಲದೆ ಸಿನಿಮಾ ಮಾಡಬೇಕೆಂದರೆ ನಿಮಗೆ ಹಾರರ್ ಕಥಾ ವಸ್ತುವೇ ಅತ್ಯಂತ ಪ್ರಶಸ್ತ; ಅಂತೆಯೇ ನಾವು ಅಂತಹ ಪ್ರಯತ್ನವನ್ನು ಮಾಡಿದ್ದೇವೆ. ಭಾರತದಲ್ಲಿ ನಿರ್ಮಾಣಗೊಳ್ಳುವ ಚಿತ್ರಗಳಿಗೆ ಒಂದೇ ಬಾರಿ ನೂರು ಬೆಳ್ಳಿ ತೆರೆ ಪ್ರದರ್ಶನ ಭಾಗ್ಯ ಸಿಗುವುದು ಕಷ್ಟ; ಹಾಗಿರುವಾಗ ನಮ್ಮ ಚಿತ್ರಕ್ಕೆ 150 ಬೆಳ್ಳಿ ತೆರೆ ಪ್ರದರ್ಶನ ಭಾಗ್ಯ ಲಭಿಸಿರುವುದು ನಮ್ಮ ಅದೃಷ್ಟ ಎಂದು ನಿರ್ಮಾಪಕ ಸುಂದರಂ ಹೇಳಿದ್ದಾರೆ.
-ಉದಯವಾಣಿ