ಮಂಗಳೂರು, ಸೆ .12: ಎ. ಜೆ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸ್ಥೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಶಾಸ್ತ್ರದ ಬಗ್ಗೆ 4 ನೇ ವಾರ್ಷಿಕ ಮೆಡಿಕ್ವಿಜ್ -2015 ವೈದ್ಯಕೀಯ ರಸ ಪ್ರಶ್ನಾ ಸ್ಪರ್ಧಾ ಕೂಟವು ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಪ್ರಾಂಶುಪಾಲ ಡಾ. ರಮೇಶ್ ಪೈ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪದವಿ ಪೂರ್ವ ಮತ್ತು ಸ್ನಾತಕೋತರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಿಯತ ಕಾಲಿಕವಾಗಿ ಆಯೋಜಿಸುವ ನಿರಂತರ ಶಿಕ್ಷಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಜರಗುವ ನಿರಂತರ ಬದಲಾವಣೆ, ಆವಿಷ್ಕಾರದ ಬಗ್ಗೆ ಜ್ಞಾನವನ್ನು ಅಭಿವೃದ್ಧಿಸಿದರೆ ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ನುಡಿದರು.
ವೈದ್ಯಕೀಯ ರಸ ಪ್ರಶ್ನಾ ಸ್ಪರ್ಧಾ ಕೂಟದಲ್ಲಿ ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದ 8 ತಂಡಗಳನ್ನು ಅಭಿನಂದಿಸಿದರು. ಸ್ಪರ್ಧಾ ಕೂಟದ ಪ್ರಥಮ ಸ್ಥಾನ ವಿಜೇತರಾದ ಕು. ವಾಣಿ ಮತ್ತು ಕು. ಹೀರಿಮಾಯಿ ಜೋಡಿ ತಂಡದವರಿಗೆ, ದ್ವಿತೀಯ ಸ್ಥಾನ ಪಡೆದ ಕು. ರಶ್ಮಿ ಮತ್ತು ಕು. ದೀಪಾಲಿ ಶೆಟ್ಟಿ ಜೋಡಿಗೆ ಪ್ರಶಸ್ತಿ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿ ಅವರ ಗಮನಾರ್ಹ ಸಾಧನೆಯನ್ನು ಶ್ಲಾಘಿಸಿದರು.
ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಇ ವಿ ಎಸ್ ಮೆಬನ್ರವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಡಾ. ದೇವದಾಸ್ ರೈ ಅವರು ಸ್ಪರ್ಧಾ ಕೂಟವನ್ನು ನಿರೂಪಿಸಿ ಅಕ್ಟೋಬರ್ ತಿಂಗಳಲ್ಲಿ ಅಂತರ್ ವೈದ್ಯಕೀಯ ಕಾಲೇಜ್ ರಸ ಪ್ರಶ್ನಾ ಸ್ಪರ್ಧಾ ಕೂಟವನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸ್ಪರ್ಧಾ ಕೂಟದಲ್ಲಿ ಕಾಲೇಜಿನ 22 ಜೋಡಿ ತಂಡಗಳು ಪ್ರಾಥಮಿಕ ಹಂತದಲ್ಲಿ ಭಾಗವಹಿಸಿದ್ದವು, 8 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು. ಡಾ. ಅಕ್ಷತಾ ರೈ ಅಂಕಗಾರಗಿದ್ದರು.
ಡಾ. ಅಭಿಷೇಕ್ ಕೃಷ್ಣ ಡಾ.ಚಾಂದಿನಿ ಭಂಡಾರಿಯವರು ಸ್ಪರ್ಧಾ ಕೂಟಕ್ಕೆ ಸಹಕರಿಸಿದ್ದರು. ಡಾ. ರತಿ ಸ್ವಾಗತಿಸಿದರು, ಡಾ. ಸೌಂದರ್ಯ ವಂದಿಸಿದರು.






