ಮಂಗಳೂರು ; ನಿನ್ನೆ ತಾನೇ ಮಂಗಳೂರಿಗೆ ಬೇಟಿ ನೀಡಿದ ರಾಜ್ಯದ ಸನ್ಮಾನ್ಯ ಗೃಹ ಸಚಿವ ಕೆ.ಜಾರ್ಜ್ ಅವರು ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ನಡೆಸುವವರ ಆರೋಪಿಗಳ ಗಡಿಪಾರು ಮಾಡುವಂತೆ ಇಲ್ಲಿನ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳಿಗೆ ಅದೇಶ ಹೊರಡಿಸಿದ್ದರೆ. ಆದರೆ ಅದರ ಮರುದಿನವೇ ಅಂದರೆ ಮಂಗಳವಾರ ಮಂಗಳೂರಿನಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಚಟುವಟಿಕೆ ನಡೆದಿದೆ.
ಮಂಗಳೂರಿನ ಸಿಟಿ ಸೆಂಟರ್ ಮಾಲ್ಗೆ ಇಬ್ಬರು ಯುವತಿಯರೊಂದಿಗೆ ತೆರಳಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೇರಳ ಮೂಲದ ನಗರದ ಕಾಲೇಜೊಂದರ ವಿದ್ಯಾರ್ಥಿ ಅರ್ಜುನ್ ಎಂಬಾತ ಇಂದು ಸಂಜೆ ನಗರದ ಕೆ.ಎಸ್.ರಾವ್ ರಸ್ತೆಯ ಸಿ.ಟಿ. ಸೆಂಟರ್ ಮಾಲ್ಗೆ ಇಬ್ಬರು ಯುವತಿಯರೊಂದಿಗೆ ತೆರಳಿದ್ದ. ಇವರಲ್ಲಿ ಒಬ್ಬಳು ಯುವತಿ ಭಿನ್ನ ಕೋಮಿನವಳಾಗಿದ್ದಳು. ಇದನ್ನು ಗಮನಿಸಿದ ಕೆಲವರು ಯುವಕನನ್ನು ತಡೆದು ಪ್ರಶ್ನಿಸಿ, ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತಕ್ಷಣ ಈ ಬಗ್ಗೆ ಮಾಹಿತಿ ಪಡೆದ ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕ ಹಾಗೂ ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಹಲ್ಲೆಗೊಳಗಾದ ಯುವಕ ಬಂದರು ಠಾಣೆಯಲ್ಲಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮಂಗಳೂರಿನ ಸಿಟಿ ಸೆಂಟರ್ ನಲ್ಲಿ ಮತ್ತೆ ಪ್ರೇಮಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಮೂಲಕ ಗೃಹ ಸಚಿವರ ಮಾತನ್ನು ನಡುಬೀದಿಯಲ್ಲಿ ಹರಾಜು ಹಾಕಲಾಯಿತ್ತು ಎಂಬ ಸಂದೇಶ ಸಾಮಾಜಿಕ ತಾಣದ ಮೂಲಕ ಎಲ್ಲೆಡೆ ಹಬ್ಬಿದೆ.

