ಮುಂಬಯಿ, ಜೂ.25 : ಕನ್ನಡ ಕಸ್ತೂರಿ ಟೊರೊಂಟೋ, ಬಿ.ವಿ ನಾಗ್ ಕಮ್ಯೂನಿಕೇಷನ್ ಇನ್ಕಾರ್ಪೋರೇಶನ್ ಕೆನಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೆನಡಾದ ಟೊರೊಂಟೋದಲ್ಲಿ ಇದೇ ಜೂ.27-28 ರಂದು ನಡೆಯುವ 11 ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಪತ್ರಿಕಾಗೋಷ್ಠಿಗೆ ಮುಂಬಯಿ ಅಲ್ಲಿನ ಯುವ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರನ್ನು ಆಯ್ಕೆ ಗೊಳಿಸಲಾಗಿದೆ ಎಂದು ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೆನಡಾ ರಾಷ್ಟ್ರದ ಟೊರೋಂಟೋ ನಗರದ ಗ್ರ್ಯಾಂಡ್ ವಿಕ್ಟೋರಿಯನ್ ಕನ್ವೇನ್ಶನ್ ಸೆಂಟರ್ನಲ್ಲಿ ಸಮ್ಮೇಳನ ಅಂಗವಾಗಿ ಜೂ. ೨೮ ರಂದು ಆಯೋಜಿಸಿರುವ `ಅನಿವಾಸಿ ಕನ್ನಡಿಗರು, ಕನ್ನಡ ಪಾಲನೆ ಮತ್ತು ಮಾಧ್ಯಮದ ಪಾತ್ರ’ ವಿಷಯವಾಗಿರಿಸಿ ಪತ್ರಕರ್ತ ವಿಶ್ವೇಶ್ವರ ಭಟ್ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಡುವ ಗೋಷ್ಠಿಯಲ್ಲಿ ರೋನ್ಸ್ ಬಂಟ್ವಾಳ್ ತಮ್ಮ ವಿಚಾರವನ್ನು ಮಂಡಿಸಲಿರುವರು. ಅಂತೆಯೇ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಪೂರ್ವಾಧ್ಯಕ್ಷ ಇ.ವಿ. ಸತ್ಯನಾರಾಯಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಕಾರ್ಯದರ್ಶಿ ಡಾ| ಮುರಳೀಧರ್, ಚಿಲ್ಲಿವಿಲ್ಲಿ ಮಾಧ್ಯಮ ದುಬೈ ಇದರ ಸತೀಶ್ ವೆಂಕಟರಮನ ದುಬೈ ಅವರು ಭಾಗವಹಿಸಲಿದ್ದಾರೆ ಸಮ್ಮೇಳನ ಸಮಿತಿ ಕೆನಡಾ ಅಧ್ಯಕ್ಷ ಹಾಗೂ ಭಾರತೀಯ ನಿರೀಕ್ಷಕ ಬಿ.ವಿ ನಾಗರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ರಾವ್ ಪುತ್ತೂರು ತಿಳಿಸಿದ್ದಾರೆ.
