ಕುಂದಾಪುರ: ಬಟ್ಟೆಕುದ್ರು ಜನರು ಶ್ರಮಜೀವಿಗಳಾಗಿದ್ದು, ಮೊಗವೀರ ಸಮಾಜದ ಅಭ್ಯುದಯಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದವರಾಗಿದ್ದಾರೆ, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದ ಬಟ್ಟೆಕುದ್ರು ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಊರಿನ ಶ್ರೇಯೋಭಿವೃದ್ಧಿಯಲ್ಲಿ ಯಾವುದೇ ರಾಜಕಾರಣವನ್ನು ಮಾಡುವುದು ತರವಲ್ಲ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜಾ ಡಾ. ಜಿ. ಶಂಕರ್ ಹೇಳಿದ್ದಾರೆ.
ತಾಲೂಕಿನ ಹಕ್ಲಾಡಿ ಸಮೀಪದ ಬಟ್ಟೆಕುದ್ರುವಿನಲ್ಲಿ ಶ್ರೀರಾಮ ಯುವಕ ಭಜನಾ ಮಂದಿರ ಬಟ್ಟೆಕುದ್ರು (ರಿ.) ಇವರಿಂದ ನಡೆಯುತ್ತಿರುವ ನೂತನ ಶ್ರೀರಾಮ ಮಂದಿರದ ಭೂಮಿಪೂಜೆ ಹಾಗೂ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಟ್ಟೆಕುದ್ರು ಗ್ರಾಮದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳಾಗಿದ್ದು ಸರಕಾರದಿಂದ ೫೦ ಲಕ್ಷ ಅನುದಾನವೂ ದೊರೆತಿದೆ. ರಸ್ತೆ, ಕುಡಿಯುವ ನೀರು, ತಡೆಗೋಡೆ ವ್ಯವಸ್ಥೆ ಮೊದಲಾದ ಕಾಮಗಾರಿಗಳು ಈ ಭಾಗದಲ್ಲಿ ನಡೆದಿರುವುದು ಸಂತಸವಾಗಿದೆ. ಹಿಂದಿನಿಂದಲೂ ಈ ಭಾಗದ ಯುವಕರು ಶ್ರೀ ದೇವಿಯ ಜಾತ್ರೆಯ ಸಂದರ್ಭವೂ ಉತ್ತಮ ಕಾರ್ಯದಲ್ಲಿ ತೊಡಗಿದ್ದು, ಶ್ರೀ ದೇವರ ಆಶೀರ್ವಾದ ಈ ಭಾಗದ ಜನರ ಮೇಲಿದೆ ಸದ್ಯ ನಡೆಯುತ್ತಿರುವ ಶ್ರೀ ರಾಮಮಂದಿರದ ಕೆಲಸ ಕಾರ್ಯಗಳು ಒಗ್ಗಟ್ಟಿನಿಂದ ಆಗಬೇಕಾಗಿದೆ. ಅಲ್ಲದೇ ಪ್ರತಿ ಕೆಲಸವೂ ಹಿರಿಯರ ಮಾರ್ಗದರ್ಶನದಲ್ಲಿ ಪಾರದರ್ಶಕವಾಗಿ ನಡೆಯಬೇಕೆಂದು ಅವರು ಇದೇ ಸಂದರ್ಭ ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಜಿ. ಶಂಕರ್ ಅವರು ವೈಯಕ್ತಿಕವಾಗಿ ಶ್ರೀರಾಮ ಮಂದಿರದ ಜೀರ್ಣೋದ್ಧಾರಕ್ಕೆ ೧ ಲಕ್ಷ ರೂ. ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಮೊಗವೀರ ಮಹಾಜನಾ ಸೇವಾಸಂಘ ಬಗ್ವಾಡಿ ಹೋಬಳಿ- ಮುಂಬಯಿ ಇದರ ಅಧ್ಯಕ್ಷ ಮಹಾಬಲ ಎಂ. ಕುಂದರ್, ಮಾಜಿ ಅಧ್ಯಕ್ಷ ಗೋಪಾಲ ಪುತ್ರನ್, ಮುಖಂಡ ಕೇಶವ ಕುಂದರ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಮೊಗವೀರ ಮಹಾಜನ ಸೇವಾಸಂಘ ಕುಂದಾಪುರ ವಲಯದ ಅಧ್ಯಕ್ಷ ಎಮ್.ಎಮ್. ಸುವರ್ಣ, ಕಾರ್ಯದರ್ಶಿ ಉದಯಕುಮಾರ್ ಹಟ್ಟಿಯಂಗಡಿ, ಮುಂಬೈ ಉದ್ಯಮಿ ಕರಣ್, ಜಗದೀಶಯ್ಯ ಹಲ್ಸನಾಡು ಮೊದಲಾದವರಿದ್ದರು.
ಮಂಜುನಾಥ ಎಂ. ನಾಯ್ಕ್ ಸ್ವಾಗತಿಸಿ ವಂದಿಸಿದರು.










