ಕನ್ನಡ ವಾರ್ತೆಗಳು

ಮುಸ್ಲಿಂ ಯುವಕನಿಂದ ಹಿಂದೂ ಯುವತಿಯ ಅಪಹರಣ : ಜೋಡಿಯನ್ನು ಪೊಲೀಸರಿಗೊಪ್ಪಿಸಿದ ಯುವಕರ ಬಂಧನ :ಹಿಂದು ಸಂಘಟನೆಗಳಿಂದ ಉರ್ವ ಠಾಣೆಗೆ ಮುತ್ತಿಗೆ

Pinterest LinkedIn Tumblr

Kidnap_youth_arrest_1

ಮಂಗಳೂರು: ಮಂಗಳೂರಿಗೆ ಬರುತ್ತಿದ್ದ ಬಸ್ಸನ್ಸು ತಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಯುವಕ-ಯುವತಿಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಅಪಹರಿಸಿದ ಹಿಂದೂ ಸಂಘಟನೆಗೆ ಸೇರಿದ ಐವರು ಕಾರ್ಯಕರ್ತರನ್ನು ಬುಧವಾರ ರಾತ್ರಿ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಗ್ಗೆ ಮಂಗಳೂರಿನ ಕೆಪಿಟಿ ಬಳಿ ಅಪಹರಣದ ಘಟನೆ ನಡೆದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಗಂಗಾವತಿ ಮೂಲದ ಬಸ್ ಕ್ಲೀನರ್ ಸಾದಿಕ್ ಮತ್ತು ಧಾರವಾಡದ ಅಪ್ರಾಪ್ತ ಯುವತಿ ಅಪಹರಣಕ್ಕೆ ಒಳಗಾದವರು. ಬಸ್ ಚಾಲಕ ಪುರುಷೋತ್ತಮ ಶೆಟ್ಟಿ, ಪ್ರಕರಣದ ಪ್ರಧಾನ ಆರೋಪಿ ಶರತ್, ಇರಾ ಬಾಬು, ಸಂತೋಷ್, ಅನಿಲ್ ಹಾಗೂ ನರೇಂದ್ರ ಬಂಧಿತರು.

ಸಾದಿಕ್ ಮಂಗಳೂರಿನಿಂದ ಹೊರ ಜಿಲ್ಲೆಗೆ ಸಂಚರಿಸುವ ಖಾಸಗಿ ಬಸ್ ಒಂದರಲ್ಲಿ ಕ್ಲೀನರ್. ಆತ ಸುರತ್ಕಲ್‌ನ ಕೃಷ್ಣಾಪುರದ ಬಾಡಿಗೆ ಮನೆಯಲ್ಲಿ ಧಾರವಾಡ ಮೂಲದ ಸ್ನೇಹಿತ ಮಲ್ಲೇಶನ ಜತೆ ವಾಸಿಸುತ್ತಿದ್ದ. ಇವರಿಬ್ಬರೂ ಆತ್ಮೀಯರು. ಈ ನಡುವೆ ಸಾದಿಕ್ ಮಲ್ಲೇಶನ ಸಂಬಂಧಿ, ಧಾರವಾಡದಲ್ಲಿರುವ ಯುವತಿಯನ್ನು ಪ್ರೀತಿಸುತ್ತಿದ್ದ. ಮಂಗಳವಾರ ರಾತ್ರಿ ಯುವತಿ ಧಾರವಾಡದಿಂದ ಸುರತ್ಕಲ್‌ಗೆ ಹೊರಟಿದ್ದರು. ದಾರಿ ಮಧ್ಯೆ ಸಾದಿಕ್ ಯುವತಿಯಿದ್ದ ಬಸ್ಸನ್ನು ಹತ್ತಿದ್ದ ಎನ್ನಲಾಗಿದೆ. ಬಸ್ ಚಾಲಕ ಪುರುಷೋತ್ತಮನಿಗೆ ಸಾದಿಕ್ ಮೊದಲೇ ಪರಿಚಯ ಇತ್ತು. ಸಾದಿಕ್ ಹಿಂದೂ ಯುವತಿ ಜತೆ ಇರುವುದನ್ನು ಗಮನಿಸಿದ ಚಾಲಕ ಈ ವಿಷಯವನ್ನು ಮಂಗಳೂರಿನ ಹಿಂದೂ ಸಂಘಟನೆ ಕಾರ್ಯಕರ್ತ ಶರತ್ ಎಂಬಾತನಿಗೆ ತಿಳಿಸಿದ್ದ .

Kidnap_youth_arrest_4 Kidnap_youth_arrest_2 Kidnap_youth_arrest_3

ಇತ್ತ ಮಂಗಳೂರಿನಲ್ಲಿ ಈ ಯುವಕ-ಯುವತಿಯನ್ನು ಹಿಡಿಯುವ ಕಾರ್ಯತಂತ್ರವೊಂದು ರೂಪುಗೊಳ್ಳುತ್ತಿತ್ತು. ಹಾಗಾಗಿ, ಸಾದಿಕ್ ಹಾಗೂ ಯುವತಿ ಸುರತ್ಕಲ್‌ನಲ್ಲಿ ಬಸ್‌ನಿಂದ ಇಳಿಯಬೇಕೆಂದು ಹೇಳಿದರೂ ಬಸ್ ಚಾಲಕ ಅವರಿಗೆ ಅಲ್ಲಿ ಇಳಿಯಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಬುಧವಾರ ಬೆಳಗ್ಗೆ 8 ಗಂಟೆಗೆ ಬಸ್ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಬಳಿ ಬರುತ್ತಿದ್ದಂತೆಯೇ ಹಿಂದೂ ಸಂಘಟನೆ ಕಾರ್ಯಕರ್ತರು ಬಸ್ ತಡೆದು ಇಬ್ಬರನ್ನೂ ಬಲಾತ್ಕಾರವಾಗಿ ಕೆಳಗಿಳಿಸಿ ಕಾರಿನಲ್ಲಿ ಹಾಕಿ ಕರೆದೊಯ್ದಿದ್ದಾರೆ.

ಕಾರ್ಪೊರೇಟರ್ ಮನೆಗೆ: ಸಾದಿಕ್ ಮತ್ತು ಯುವತಿಯನ್ನು ಕಾರಿನಲ್ಲಿ ಹಾಕಿ ಅವರನ್ನು ಕೋಡಿಕಲ್‌ನ ಕಾರ್ಪೊರೇಟರ್ ಹರೀಶ್ ಅವರ ಮನೆಗೆ ಕರೆದೊಯ್ಯಲಾಗಿತ್ತು. ಈ ನಡುವೆ, ಕಾರಿನಲ್ಲಿ ಸಾದಿಕ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಇತ್ತ ಕಾರ್ಪೊರೇಟರ್ ಹರೀಶ್ ಅವರು ಇಬ್ಬರನ್ನೂ ಉರ್ವ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಒಯ್ಯಲಾಯಿತು.

ಈ ನಡುವೆ ಯುವತಿ ಹಾಗೂ ಸಾದಿಕ್‌ನನ್ನು ಅಪಹರಣದ ಬಗ್ಗೆ ಸಾದಿಕ್‌ನ ಸ್ನೇಹಿತ, ಯುವತಿಯ ಸಂಬಂಧಿ ಮಲ್ಲೇಶ ಉರ್ವ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಉರ್ವ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಲಕ ಪುರುಷೋತ್ತಮ ಶೆಟ್ಟಿ ಹೊರತುಪಡಿಸಿ ಉಳಿದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

Kidnap_youth_arrest_5 Kidnap_youth_arrest_6 Kidnap_youth_arrest_7

ಅಪ್ರಾಪ್ತೆ, ಆದರೆ, ಮದುವೆಯಾಗಿತ್ತು:

ಸಾದಿಕ್ ಮೇಲೂ ಅಪಹರಣ ಪ್ರಕರಣ: ಸಾದಿಕ್ ಜತೆಯಲ್ಲಿದ್ದ ಯುವತಿ ಅಪ್ರಾಪ್ತೆಯಾಗಿದ್ದು, ಆಕೆಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಆಕೆ ಸಾದಿಕ್‌ನನ್ನು ಪ್ರೀತಿಸುತ್ತಿದ್ದು, ಅದೇ ಕಾರಣಕ್ಕೆ ಆಕೆ ಧಾರವಾಡದಿಂದ ಕುಂದಾಪುರಕ್ಕೆ ಬಂದು ಅಲ್ಲಿಂದ ಸಾದಿಕ್ ಜತೆಯಲ್ಲಿ ಸುರತ್ಕಲ್‌ಗೆ ಬಂದಿದ್ದಾಳೆ.

ಯುವತಿಯನ್ನು ಸಾದಿಕ್ ಅಪಹರಿಸಿದ್ದಾನೆ ಎಂದು ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರವೇ ಪ್ರಕರಣ ದಾಖಲಾಗಿತ್ತು. ಯುವತಿ ಅಪ್ರಾಪ್ತಳಾಗಿದ್ದ ಕಾರಣ ಸಾದಿಕ್ ಆಕೆಯನ್ನು ಕರೆದುಕೊಂಡು ಬಂದಿದ್ದರೂ ಅದು ಅಪಹರಣ ಪ್ರಕರಣವಾಗುವುದರಿಂದ ಸಾದಿಕ್ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಧಾರವಾಡ ಪೊಲೀಸರು ಗುರುವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿ ಯುವತಿ ಮತ್ತು ಸಾದಿಕ್‌ನನ್ನು ವಶಕ್ಕೆ ಪಡೆದು ಧಾರವಾಡಕ್ಕೆ ಕರೆದೊಯ್ದಿದ್ದಾರೆ.

ಬಿಜೆಪಿ, ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ:

ಅಪ್ರಾಪ್ತ ಯುವತಿಯನ್ನು ಅಪಹರಿಸುತ್ತಿದ್ದ ಬಗ್ಗೆ ಮಾಹಿತಿ ಬಂದು ಅವರನ್ನು ಕೆಪಿಟಿಯಲ್ಲಿ ಬಸ್‌ನಿಂದ ಇಳಿಸಿ ಯುವತಿಯನ್ನು ರಕ್ಷಿಸಿದ್ದೇವೆ. ಮತ್ತು ಆರೋಪಿಯನ್ನು ಉರ್ವ ಪೊಲೀಸರಿಗೆ ಒಪ್ಪಿಸಿದ್ದೇವೆ. ಹಾಗಿದ್ದರೂ ಕಾರ್ಯಕರ್ತರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಉರ್ವ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮನಪಾ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Write A Comment