ಕೋಹಿಮಾ, ಗುವಾಹಟಿ: ಅತ್ಯಾಚಾರ ಆರೋಪಿಯನ್ನು ಪ್ರತಿಭಟನಾಕಾರರು ರಸ್ತೆಯಲ್ಲಿ ಎಳೆದೊಯ್ದು ಹತ್ಯೆ ಮಾಡಿದ ಘಟನೆಯ ನಂತರ ಪ್ರಕ್ಷುಬ್ಧಗೊಂಡಿದ್ದ ದಿಮಾಪುರ ನಿಧಾನವಾಗಿ ಸಹಜಸ್ಥಿತಿಯತ್ತ ಮರಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಮುಂದುವ ರೆಸಲಾಗಿದೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರತೀಯ ಮೀಸಲು ಪಡೆಯ (ಐಆರ್ಬಿ) 11 ತುಕಡಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 3 ತುಕಡಿಗಳನ್ನು ನಿಯೋಜಿಸಲಾಗಿದೆ. ಆರೋಪಿ ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ತುಣುಕುಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದು, ಆರೋಪಿಗಳ ಪತ್ತೆಗೆ ನೆರವಾಗಲಿದೆ. ಹತ್ಯೆಗೆ ಕಾರಣರಾದವರ ವಿರುದ್ಧ ದೂರು ದಾಖಲಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಆಗ್ರಹ: ಅತ್ಯಾಚಾರ ಆರೋಪಿಯನ್ನು ಜೈಲಿನಿಂದ ಎಳೆದೊಯ್ದು ಕೊಂದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಮತ್ತು ಹತ್ಯೆಗೆ ಕಾರಣರಾದ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್, ನಾಗಾಲ್ಯಾಂಡ್ ಸರ್ಕಾರವನ್ನು ಆಗ್ರಹಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ.
ನಾಗಾಲ್ಯಾಂಡ್ಗೆ ಲಾರಿ ಇಲ್ಲ: ಪ್ರತಿಭಟನಾಕಾರರ ದೌರ್ಜನ್ಯಕ್ಕೆ ಬಲಿಯಾದ ಅತ್ಯಾಚಾರ ಆರೋಪಿ ಅಸ್ಸಾಂ ಮೂಲದ ಉದ್ಯಮಿ. ‘ಅಸ್ಸಾಂ ಮೂಲದ ಲಾರಿ ಚಾಲಕರು, ಉದ್ಯಮಿಗಳ ಮೇಲೆ ನಾಗಾಲ್ಯಾಂಡ್ನಲ್ಲಿ ದೌರ್ಜನ್ಯ ನಡೆಯುತ್ತಲೇ ಇದೆ. ಈ ಪ್ರಕರಣದ ತನಿಖೆ ನಡೆಸಿ, ಹತ್ಯೆಯಾದ ಆರೋಪಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಅಸ್ಸಾಂ ಲಾರಿ ಮಾಲೀಕರ ಮತ್ತು ಚಾಲಕರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ. ಹತ್ಯೆ ಖಂಡಿಸಿ ದಿಮಾಪುರ ಮತ್ತು ನಾಗಾಲ್ಯಾಂಡ್ನ ಇತರ ಭಾಗಗಳಿಗೆ ಸರಕು ಸಾಗಣೆ ನಿಲ್ಲಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಆರೋಪ
ಗುವಾಹಟಿ(ಪಿಟಿಐ): ದಿಮಾಪುರ ಕಾರಾಗೃಹದಲ್ಲಿದ್ದ ಅತ್ಯಾಚಾರ ಆರೋಪಿಯನ್ನು ಹೊರಗೆಳೆದು ಹತ್ಯೆ ಮಾಡಲು ಜೈಲಿನ ಭದ್ರತಾ ಪಡೆಗಳ ನಿರ್ಲಕ್ಷ್ಯವೇ ಕಾರಣ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯಿ ಆರೋಪಿಸಿದ್ದಾರೆ.
ಜೈಲಿಗೆ ಕೇಂದ್ರಿಯ ಭದ್ರತಾ ಪಡೆಗಳು ಭದ್ರತೆ ನೀಡಿವೆ. ಆರೋಪಿಯನ್ನು ಹೊರಗೆಳೆದು ಹತ್ಯೆ ಮಾಡುವುದನ್ನು ತಡೆಯಬಹುದಿತ್ತು ಎಂದು ಅವರು ಹೇಳಿದ್ದಾರೆ. ಅತ್ಯಾಚಾರಿ ಹತ್ಯೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗೊಗೋಯಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿ ಭರವಸೆ: ನಾಗಾಲ್ಯಾಂಡ್ನಲ್ಲಿ ನೆಲೆಸಿರುವ ಅಸ್ಸಾಂ ಜನರ ಭದ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್. ಜೆಲಿಯಾಂಗ್ ಹೇಳಿದ್ದಾರೆ.
