ಮುಂಬಯಿ, ಜ.24: ಕನ್ನಡ ಸಾಹಿತ್ಯ ಪರಿಷತ್ತು ಇದರ ಶತಮಾನೋತ್ಸವದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ವಿಂಶತಿ ವರ್ಷಾಚರಣೆಯ ಅಂಗವಾಗಿ ದಕ್ಷಿಣ ಭಾರತದ ಭಕ್ತಿ ಪರಂಪರೆ ಮತ್ತು ದಾಸಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ ವಿಷಯವಾಗಿರಿಸಿ ಮೂರು ದಿನಗಳಲ್ಲಿ ಆಯೋಜಿಸಿದ್ದ ಮಹಾರಾಷ್ಟ್ರ ರಾಜ್ಯ ಕನ್ನಡಿಗರ ಒಂಭತ್ತನೇ ಸಾಹಿತ್ಯ ಸಮ್ಮೇಳನ ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಆರಂಭಗೊಂಡಿತು.
ಕನ್ನಡ ವಿಶ್ವವಿದ್ಯಾಲಯ ಹಂಪಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ಕರ್ನಾಟಕ ಸಂಘ ಮುಂಬಯಿ ಮತ್ತು ನಾರಾಯಣಾಮೃತ ಫೌಂಡೇಶನ್ ಮುಂಬಯಿ ಸಂಸ್ಥೆಗಳ ಸಹಯೋಗದೊಂದಿಗೆ ಮಟ್ಟಿ ವಾಸುದೇವ ಪ್ರಭು ಮಹಾದ್ವಾರದ ನೆಕ್ಕಾರು ಕೃಷ್ಣದಾಸ ಮಂಟಪದಲ್ಲಿನ ಸಂತ ಭದ್ರಗಿರಿ ಅಚ್ಯುತದಾಸ ವೇದಿಕೆಯಲ್ಲಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಅಧ್ಯಕ್ಷತೆಯಲ್ಲಿ ಆಯೋಜಿಸಲ್ಪಟ್ಟ 9ನೇ ಸಾಹಿತ್ಯ ಸಮ್ಮೇಳನವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಕುಲಪತಿ ಹಿ.ಚಿ ಬೋರಲಿಂಗಯ್ಯ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮೊದಲ ದಿನದ ಸಮ್ಮೇಳನದಲ್ಲಿ ವಿಶೇಷ ಅತಿಥಿಗಳಾಗಿ ನಾಡಿನ ಹೆಸರಾಂತ ಸಾಹಿತಿ, ಕಾದಂಬರಿಕಾರ, ಭಾರತೀಯ ಸಾಹಿತ್ಯ ಸಾಮ್ರಾಟ ಡಾ ಎಸ್.ಎಲ್ ಭೈರಪ್ಪ ಉಪಸ್ಥಿತರಿದ್ದು, ಕರ್ನಾಟಕ ಹರಿದಾಸ ಸಂಶೋಧನ ಕೇಂದ್ರ ಬೆಂಗಳೂರು ಇದರ ಸಂಸ್ಥಾಪಕ ಡಾ ರಂಗನಾಥ ಭಾರದ್ವಾಜ್ ಅವರ ಕೃತಿ ‘ಆ್ಯನ್ ಇಂಗ್ಲೀಷ್ ಕಾಮೆಂಟರಿ ಆನ್ ಟ್ರ್ಯಾನ್ಸ್ಫಾರ್ಮೇಶನ್ ಆಫ್ ಹರಿಕಥಾಮೃತ ಸಾರ ಆಫ್ ಜಗನ್ನಾಥ್ ದಾಸರು’ ಕೃತಿಯನ್ನು ಬಿಡುಗಡೆ ಗೊಳಿಸಿದರು.
ದೇಶಿ ಕಾವ್ಯ ರೂಪಕಗಳನ್ನು ಬೆಳೆಸಿ ಉಳಿಸಿದ್ದು ಹಳ್ಳಿಗರು. ಅಕ್ಷರ ಅಹಂಕಾರದ ಸಂಕೇತವಾಗುತ್ತಿದೆ. ಅಕ್ಷರ ಮೀರಿದವರು ಜಗತ್ತನ್ನೇ ಮೀರುವರು. ಅಕ್ಷರಕ್ಕೂ ಜ್ಞಾನಕ್ಕೂ ಸಂಬಂಧವಿಲ್ಲ. ದಾಸ ಸಾಹಿತ್ಯದ ನೂರಾಂಶಗಳು ಜನ ಸಾಮಾನ್ಯರ ಭಾಷೆಯಲ್ಲಿ ರೂಪಕವಾಗಿದೆ. ಪರಸ್ಪರ ಕೂಡುಕೊಳ್ಳವಿಕೆಯ ಚರ್ಚೆ ನಡೆದಲ್ಲಿ ಈ ಸಮ್ಮೇಳನ ಅರ್ಥಪೂರ್ಣವಾಗುವುದು ಎಂದು ಸಮ್ಮೇಳನವನ್ನು ಉದ್ಘಾಟಿಸಿ ಬೋರಲಿಂಗಯ್ಯರು ಅಭಿಪ್ರಾಯ ಪಟ್ಟರು.
ಡಾ ಭೈರಪ್ಪ ಮಾತನಾಡಿ ಭಾರತೀಯ ಭಾಷೆಗಳ ಕೃತಿಗಳನ್ನು ಇಲ್ಲಿನ ಭಾಷೆಗಳಿಗೆ ಅನುವಾದಿಸಬಹುದು. ಅಲ್ಲಿ ರಸ ಮತ್ತು ಭಾವಗಳು ಅದೇ ರೀತಿ ಅನುವಾದಗೊಳ್ಳಬಹುದು. ಆದರೆ ಇಂಗ್ಲೀಷ್ ಭಾಷೆಗೆ ತರುವುದು ಬಹಳ ಕಷ್ಟದ ಕೆಲಸ. ಏಕೆಂದರೆ ನಮ್ಮ ಭಾರತೀಯ ಭಾಷೆಗಳಲ್ಲಿ ಪ್ರತಿಯೊಂದು ಶಬ್ಧಕ್ಕೂ ಸಾಂಸ್ಕೃತಿಕ ಅರ್ಥವಿದೆ. ನಮ್ಮ ಧರ್ಮದಲ್ಲಿ ನಂಬಿಕೆಯುಂಟು ಮಾಡುವ ಕೆಲಸವನ್ನು ದಾಸ ಸಾಹಿತ್ಯ ಮಾಡಿದೆ ಎಂದು ಹೆಳಿದ ಅವರು ಸರ್.ಎಂ. ವಿಶ್ವೇಶ್ವರಯ್ಯ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡುತ್ತಾ ಅವರು ಬಹಳ ದೊಡ್ಡ ಇಂಜಿನೀಯರ್ ಮಾತ್ರವಲ್ಲ ಅವರೊಬ್ಬ ಶ್ರೇಷ್ಠ ಇಕಾನಾಮಿಸ್ಟ್ ಎಂದು ಹೇಳುತ್ತಾ ನಮ್ಮ ಇತಿಹಾಸದ ದೊಡ್ಡ ವ್ಯಕ್ತಿಗಳನ್ನು ಹರಿಯದಿದ್ದರೆ ನಾವು ದೊಡ್ಡವರಾಗುವುದಿಲ್ಲ. ಆದುದರಿಂದ ಸಾಹಿತ್ಯ ಪರಿಷತ್ತು ಅವರನ್ನು ನೆನೆಪಿಸುವ ಕಾರ್ಯ ಮಾಡಬೇಕು ಎಂದರು.
ಬರುವ ಸಾಹಿತ್ಯ ಸಮ್ಮೇಳನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ನೆನಪಿನಲ್ಲಿ ಪ್ರಾರಂಭ ಅಥವಾ ಅಂತ್ಯ ಒಂದು ವಿಶೇಷ ಅಧಿವೇಶನವನ್ನು ಹಮ್ಮಿಕೊಳ್ಳಲಾಗುವುದು. ಎಂದು ಕರೆ ನೀಡುತ್ತಾ ಸಹಸ್ತ್ರಾರು ವರ್ಷಗಳಿಂದ ದೇಶವನ್ನು ಒಂದೇಯಾಗಿ ಭಕ್ತಿ ಎಂಬ ಭಾವನೆಯಿಂದ ಕಟ್ಟಿಕೊಟ್ಟದ್ದೇ ದಾಸ ಪರಂಪರೆ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಡಾ ಅರಳುಮಲ್ಲಿಗೆ ನುಡಿದರು.
ಮನೋವಿಕಾಸನದ ಸಮ್ಮೇಳನ ಇದಾಗಿದ್ದು ಸಾವಿರ ಜನತೆಯ ಅಗತ್ಯಕ್ಕಿಂತ ಆಳಿಸಿ ಕೇಳುವ ಮನಸ್ಸುಗಳೇ ಇಲ್ಲಿ ಅಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿದರು.
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇದರ ಮುಖ್ಯಸ್ಥ ಡಾ ಜಿ.ಎನ್ ಉಪಾಧ್ಯ ಆಶಯ ಭಾಷಣಗೈದು ಸುಮಾರು 150 ಕಿಲೋ ಮೀಟರ್ ಉದ್ದಗಲದ ಮುಂಬಯಿ ಮಹಾನಗರದಲ್ಲಿ ಅಂದಾಜು 20 ಕ್ಷ ಕನ್ನಡಿಗರು ಇದ್ದರೂ ಕನ್ನಡತನ ಹುರಿದುಂಬಿಸಿ ಬೆಳೆಸುವಲ್ಲಿ ಸಕ್ರೀಯರಾಗಿದ್ದಾರೆ. ಮಹಾರಾಷ್ಟ್ರದಾದ್ಯಂತ ಸುಮಾರು 73 ಲಕ್ಷ ಕನ್ನಡಿಗರಿದ್ದು ಹೋರನಾಡಲ್ಲಿ 2 ಕೋಟಿ ಕನ್ನಡಿಗರು ಇದ್ದು ಕನ್ನಡಾಂಭೆಯ ಸೇವೆಗೈಯುತ್ತಿದ್ದಾರೆ. ಆದರೆ ಹೊರನಾಡಿನ ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ವಂಚಿತ ಕನ್ನಡಿಗರಿಗೆ ಇದೇ ಪ್ರಧಾನವಾದ ಸಮ್ಮೇಳನವೇ ಸರಿ. ಹತಾಶಗೊಳಿಸುವ ಮನಗಳಿಗೆ ಆತ್ಮವಿಶ್ವಾಸ ತುಂಬುವ ಭಕ್ತಿ ಸಾಹಿತ್ಯವಾಗಲಿ ಎಂದರು.
ಚಿಣ್ಣರ ನಾಡಗೀತೆಯೊಂದಿಗೆ ಆದಿಗೊಂಡ ಸಮ್ಮೇಳನಕ್ಕೆ ಡಾ ಸಹನಾ ಪೋತಿ ಅವರು ಮಂಗಲಗೀತೆ ಹಾಡಿದರು. ವೈ.ವಿ ಮಧುಸೂಧನ ರಾವ್ ವೇದಿಕೆಗಳ ಪರಿಚಯವನ್ನಿತ್ತರು. ಕೃತಿ ಮತ್ತು ಕೃತಿಕಾರ ಡಾ ಭಾರದ್ವಾಜ್ ಬಗ್ಗೆ ನಾಟಕ ಪದ್ಧತಿ ತಜ್ಞ ಸುಬ್ರಾಯ ಭಟ್ಟ ತಮ್ಮ ಅನಿಸಿಕೆಗಳನ್ನು ಪಡಿಸಿದರು. ನ್ಯಾ ಅಮಿತಾ ಭಾಗ್ವತ್ ಕಾರ್ಯಕ್ರಮ ನಿರೂಪಿಸಿದರು. ಡಾ ಕರುಣಾಕರ ಶೆಟ್ಟಿ ಅಭಾರ ಮನ್ನಿಸಿದರು. ಸಮ್ಮೇಳನದ ಅಂಗವಾಗಿ ಮಧ್ಯಾಹ್ನ ಅಪರ್ಣ ಭಟ್ ಮತ್ತು ಬಳಗವು ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರಕಾಶ್ ಜಿ.ಬುರುಡೆ ಗೌ ಪ್ರ ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್ ಮತ್ತು ನಾರಾಯಣಾಮೃತ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಎನ್.ಆರ್ ರಾವ್ ಉಪಸ್ಥಿತರಿದ್ದು, ಕನ್ನಡ ವಿಶ್ವವಿದ್ಯಾಲಯ ಪ್ರಸಾರಂಗ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಂಸ್ಥೆಗಳ ಆಯೋಜಕತ್ವ ದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಡಾ ಅರಳು ಮಲ್ಲಿಗೆ ಅವರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಮತ್ತು ಪುರಂದರದಾಸ ಅಧ್ಯಯನ ಪೀಠ ಸಂಯೋಜನೆಯಲ್ಲಿ ನಡೆಸಲ್ಪಟ್ಟ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಡಾ ಸುಬ್ಬಣ್ಣ ರೈ ಅವರು ಪ್ರಾಸ್ತಾವಿಕ ಭಾಷಣಗೈದರು. ಡಾ ಬಸವರಾಜ ಸಬರದ ಅವರು ‘ಕನ್ನಡ ಭಕ್ತಿ ಪರಂಪರೆ ಮತ್ತು ದಾಸ ಸಾಹಿತ್ಯ’ ವಿಷಯದಲ್ಲಿ, ಡಾ ಸ್ವಾಮಿರಾದ ಕುಲಕರ್ಣಿ ‘ಕನ್ನಡ ಅಲಕ್ಷಿತ ಭಕ್ತಿ ಸಾಹಿತ್ಯ’ ವಿಷಯದಲ್ಲಿ, ಡಾ ಕೃಷ್ಣ ಕೊಲ್ಲಾರ ಕುಲಕರ್ಣಿ ‘ಮರಾಠಿ ಭಕ್ತಿ ಸಾಹಿತ್ಯ ಮತ್ತು ಪರಂಪರೆ’ ವಿಷಯದಲ್ಲಿ ಮತ್ತು ಚಂದ್ರಾ ಮುತಾಲಿಕ ಅವರು ‘ಮರಾಠಿ ಅಲಕ್ಷಿತ ಭಕ್ತಿ ಸಾಹಿತ್ಯ’ ವಿಷಯದಲ್ಲಿ ಉಪನ್ಯಾಸ ನೀಡಿದರು. ಜಿ.ಪಿ.ಕುಸುಮ ಗೋಷ್ಠಿ ನಿರೂಪಿಸಿದರು. ಎಸ್.ಕೆ ಸುದರ್ ವಂದನಾರ್ಪಣೆ ಸಮರ್ಪಿದರು.
ಉಪಹಾರದ ಸೇವೆಗೆ ಮಾರು ಹೋದ ಸಭಿಕರು:
ಡಾ ಉಪಾಧ್ಯರು ಆಶಯ ನುಡಿಗಳನ್ನಾಡುತ್ತಿರುವಾಗಲೇ ಸಭಿಕರಿಗೆ ಉಪಹಾರದ ಸೇವೆ ಆರಂಭಿಸಿರುವುದರಿಂದ ಉಪಾಧ್ಯರ ಅನಿಸಿಕೆಗಳಿಕ್ಕಿಂತಲೂ ಸಭಿಕರದ್ದೇ ಸ್ವರ ಹೆಚ್ಚಾಯಿತು. ಬಳಿಕ ಅದೇ ಗಲಿಬಿಲಿಯ ಸದ್ದುಗದ್ದಲದ ಮಧ್ಯೆಯೇ ಹಿ.ಚಿ ಬೋರಲಿಂಗಯ್ಯ ಅವರು ಉದ್ಘಾಟನಾ ಭಾಷಣವನ್ನೂ ಮಾಡಬೇಕಾಯಿತು. ಸಭಿಕರಲ್ಲಿನ ಕೆಲವರು ನೀಡಿದ ಪೂರಿ, ಲಡ್ಡು ಬಗ್ಗೆ ಸಡ್ಡು ಹೊಡೆದು ತಿನ್ನುವ ತವಕದಲ್ಲಿದ್ದರೆ ಅನೇಕರು ಪ್ಲೇಟುಗಳನ್ನು ಇಟ್ಟು ಕೈ ತೊಳೆಯುವ ಧಾವಂತಕ್ಕೆ ಮುಂದಾಗಿ ಒಟ್ಟಾರೆ ಆಶಯ ಮತ್ತು ಉದ್ಘಾಟನಾ ಭಾಷಣ ಮಹತ್ವ ಕಳಕೊಂಡಿತು. ಆದರೆ ಭಾರೀ ಆತುರದಿಂದ ಡಾ ಎಸ್.ಎಲ್ ಭೈರಪ್ಪರ ಭಾಷಣ ಕೆಳಲು ಕಾದುಕೊಂಡಿದ್ದ ಸಭಿಕರು ಮಕ್ಕಳು ಹೇಗೆ ಟೋಮ್ ಎಂಡ್ ಜಿರ್ರಿ ಕಾರ್ಟೂನು ಮೌನವಾಗಿ ಆಳಿಸುತ್ತಾರೋ ಹಾಗೇಯೇ ಗಬ್ಚುಪ್ ಆಗಿ ಕೇಳಿಸುತ್ತಾ ಮುಂಬಯಿಗರ ಶಿಸ್ತುಬದ್ಧವಾದ ಸಭಾ ಸಭ್ಯತೆಯನ್ನು ಮತ್ತೆ ತೋರ್ಪಡಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)




























