ಮಂಗಳೂರು,ಜ.24: ನಗರದ ಲಾಲ್ಬಾಗ್ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ನೂತನ ಘನ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಯೋಜನೆ ಉದ್ಘಾಟಿಸಿ, ಘನತ್ಯಾಜ್ಯ ವಿಲೇವಾರಿ ಎಲ್ಲ ಸ್ಥಳೀಯಾಡಳಿತಕ್ಕೂ ಬಹುದೊಡ್ಡ ಸವಾಲಾಗಿದ್ದು, ರಾಜ್ಯದಲ್ಲೇ ಪ್ರಥಮವಾದ ಯೋಜನೆ ಮಂಗಳೂರಿನಲ್ಲಿ ಜಾರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶುಕ್ರವಾರ ಮಾತನಾಡಿದರು.
ಒಟ್ಟು 588 ಕೋಟಿ ರೂ.ನ ಎರಡನೇ ಹಂತದ ಕುಡ್ಸೆಂಪ್ ಯೋಜನೆಯನ್ನು ನಗರದಲ್ಲಿ ಅಳವಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ ಅವರು, ಮೂರನೇ ಹಂತದ ನಗರೋತ್ಥಾನ ಕ್ರಿಯಾ ಯೋಜನೆ ಮಂಜೂರಾಗಿದೆ ಎಂದರು. ಮಂಗಳೂರು ಮಹಾನಗರಪಾಲಿಕೆಯ ಸಿಬ್ಬಂದಿ ಕೊರತೆ ನಿವಾರಣೆಗೆ ಈಗಾಗಲೇ ಕೆಪಿಎಸ್ಸಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಜನವರಿ ಅಂತ್ಯದಲ್ಲಿ ನೋಟಿಫಿಕೇಶನ್ ಆಗಬಹುದು ಎಂದು ಅವರು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಗೆ 13ನೇ ಹಣಕಾಸು ಯೋಜನೆಯಲ್ಲಿ 40 ಕೋಟಿ ರೂ., ಎಸ್ಎಫ್ಸಿಯಲ್ಲಿ 22 ಕೋಟಿ ರೂ., ಸ್ಮಶಾನ ಮತ್ತು ಉದ್ಯಾನವನ ಅಭಿವೃದ್ಧಿಗೆ 2.5 ಕೋಟಿ ರೂ., ಕದ್ರಿ ಜಿಂಕೆ ವನ ಅಭಿವೃದ್ಧಿಗೆ 4.97 ಕೋಟಿ ರೂ. ಮಂಜೂರಾಗಿದೆ ಎಂದು ಅವರು ಹೇಳಿದರು. ಪಾಲಿಕೆಗೆ ಹೆಚ್ಚಿನ ಹೊರೆಯಾಗಬಾರದು ಎಂಬ ನಿಟ್ಟಿನಲ್ಲಿ ನೀರು ಮಂಡಳಿ ಮೂಲಕ ಹಣಕಾಸು ನೆರವು ಒದಗಿಸಿ ಪಾಲಿಕೆ ಮತ್ತು ಸರಕಾರ ಜಂಟಿಯಾಗಿ 75 ಕೋಟಿ ರೂ. ವೆಚ್ಚದಲ್ಲಿ ತುಂಬೆ ಕಿಂಡಿ ಅಣೆಕಟ್ಟು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಗರಾಡಳಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮೇಯರ್ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜೆ.ಆರ್.ಲೋಬೋ, ಮೊಯ್ದೀನ್ ಬಾವ, ಉಪಮೇಯರ್ ಕವಿತಾ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಜೆಸಿಂತಾ ವಿಲ್ರೆಡ್, ಪುರುಷೋತ್ತಮ ಚಿತ್ರಾಪುರ ಉಪಸ್ಥಿತರಿದ್ದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಹರೀಶ್ ಕುಮಾರ್, ಎಸ್.ಆರ್.ಧಾರವಾಡ, ಮುಡಾ ಆಯುಕ್ತ ನಜೀರ್, ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾನ್ ಜಾಕೋಬ್, ತರ್ಜಿಂದರ್ ಸಿಂಗ್, ಸಿಇಒ ಹರಿದಾಸ್ ಸಲ್ಯಾನ್, ಪಾಲಿಕೆ ಆರೋಗ್ಯಾಕಾರಿ ಡಾ.ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು. ಪರಿಸರ ಎಂಜಿನಿಯರ್ ಮಧು ಸ್ವಾಗತಿಸಿದರು. ಆಯುಕ್ತೆ ಹೆಪ್ಸಿಬಾ ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೊಸ ಯೋಜನೆ ವೈಶಿಷ್ಟ್ಯ: ಮನೆ ಮನೆ ಕಸ ಸಂಗ್ರಹಕ್ಕೆ 55 ಮಿನಿ ಟಿಪ್ಪರ್, 16 ಕಾಂಪ್ಯಾಕ್ಟರ್, 700 ಸಿಬ್ಬಂದಿ, ಯಾಂತ್ರಿಕ ಕಸ ಗುಡಿಸುವ ವಾಹನ, ಚರಂಡಿ ಸ್ವಚ್ಛಗೊಳಿಸುವ ಮೂರು ಯಂತ್ರ ಹೊಸ ಯೋಜನೆಯಲ್ಲಿದೆ. ಸಂಗ್ರಹಿಸಿದ ಘನ ತ್ಯಾಜ್ಯವನ್ನು ಹೈಡ್ರಾಲಿಕ್ ವಾಹನಗಳ ಮೂಲಕ ಸಾಗಣೆ ಮಾಡಲಾಗುವುದು.
ಬುಧವಾರ ಒಣ ಕಸ: ಹಸಿ ಮತ್ತು ಒಣ ಕಸವನ್ನು ಸಾರ್ವಜನಿಕರು ಮೂಲದಲ್ಲೇ ಬೇರ್ಪಡಿಸಿ. ವಾರದ ಪ್ರತಿದಿನವೂ ಹಸಿ ಕಸವನ್ನು ಸಂಗ್ರಹಿಸಲಾಗುವುದು. ಪ್ರತಿ ಬುಧವಾರ ಸಾರ್ವಜನಿಕರು ಒಣಕಸವನ್ನು ಪ್ರತ್ಯೇಕವಾಗಿ ನೀಡಬಹುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.









