ಕರ್ನಾಟಕ

ಶಿಕ್ಷಣ ಮಾಧ್ಯಮವಾಗಿ ಕನ್ನಡ ಕಡ್ಡಾಯಕ್ಕೆ ಒಂದು ವರ್ಷ ಗಡುವು: ಹಾಲಂಬಿ

Pinterest LinkedIn Tumblr

halambi

ಬೆಂಗಳೂರು : ಶಿಕ್ಷಣ ಮಾಧ್ಯಮವಾಗಿ ಕನ್ನಡ ಕಡ್ಡಾಯಗೊಳಿಸಲು ಒಂದು ವರ್ಷದೊಳಗೆ ರಾಜ್ಯ ಸರಕಾರ ಗಂಭೀರ ಪ್ರಯತ್ನ ಮಾಡದೇ ಇದ್ದಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸದಿರುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗುತ್ತದೆ ಎಂದು ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಎಚ್ಚರಿಸಿದ್ದಾರೆ.

ಕಸಾಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ”ಕಸಾಪ ಸರಕಾರದ ಬಾಲಂಗೋಚಿಯಲ್ಲ. ಕನ್ನಡ, ಕನ್ನಡಿಗರ ಬದುಕನ್ನು ಕಟ್ಟಿಕೊಡುವ ಹೊಣೆಯರಿತ ಸಂಸ್ಥೆ,” ಎಂದು ಪ್ರತಿಪಾದಿಸಿದ ಅವರು, ”ಜನಸಮುದಾಯದ ಆಶಯವನ್ನು ಬಿಂಬಿಸುವ, ಹಕ್ಕೊತ್ತಾಯ ಮಂಡಿಸುವ ಪ್ರಾತಿನಿಧಿಕ ಸಂಸ್ಥೆ,” ಎಂದರು.

”ಸಮ್ಮೇಳನದ ಅಧ್ಯಕ್ಷತೆಯನ್ನು ಒಪ್ಪಿಕೊಳ್ಳದೇ ಇರುವ ಸೈದ್ಧಾಂತಿಕ ಕಾರಣವನ್ನು ವಿವರಿಸಿ ದೇವನೂರು ಮಹಾದೇವ ಅವರು ಬರೆದ ಪತ್ರ ತಲುಪಿದೆ. ಕಾರ್ಯಕಾರಿ ಸಮಿತಿ ಸಭೆಯು ದೇವನೂರರ ಆಶಯವನ್ನು ಸುದೀರ್ಘವಾಗಿ ಚರ್ಚಿಸಿದೆ. ಸಾಹಿತ್ಯ ಸಮ್ಮೇಳನವನ್ನು ನಡೆಸದೇ ಇದ್ದಲ್ಲಿ ಕನ್ನಡ ಕಡ್ಡಾಯಗೊಳಿಸುವ ಕಾಯಿದೆ ತತ್‌ಕ್ಷಣಕ್ಕೆ ಜಾರಿಯಾಗುವುದಿಲ್ಲ. ವಿಷಯ ಸುಪ್ರೀಂಕೋರ್ಟ್ ಮುಂದೆ ಇದ್ದು, ಸಂವಿಧಾನದ ತಿದ್ದುಪಡಿ ತಂದ ಬಳಿಕವೇ ಅದನ್ನು ಅನುಷ್ಠಾನ ಮಾಡಲು ಸಾಧ್ಯ. ದೇವನೂರರ ಆಶಯ ಸರಿಯೆನಿಸಿದ್ದರಿಂದಾಗಿ ಸಮ್ಮೇಳನದ ವೇದಿಕೆಯ ಮೂಲಕವೇ ರಾಜ್ಯದಾದ್ಯಂತ ಕನ್ನಡ ಅನುಷ್ಠಾನಕ್ಕಾಗಿ ಜನಾಂದೋಲನ ರೂಪಿಸಲು ಕಾರ್ಯಕಾರಿ ಸಮಿತಿ ಸಭೆ ನಿರ್ಣಯಿಸಿದೆ. ಜನಾಂದೋಲನದ ನೇತೃತ್ವವನ್ನು ದೇವನೂರು ಅವರಿಗೆ ವಹಿಸಲು ಸಭೆ ಒಪ್ಪಿದೆ. ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವವರೆಗೆ ನಡೆಸುವ ಎಲ್ಲಾ ಹೋರಾಟಕ್ಕೂ ಕಸಾಪ ಅವರಿಗೆ ಹೆಗಲು ಕೊಡುತ್ತದೆ. ಗೋಕಾಕ್ ಮಾದರಿ ಹೋರಾಟ ರೂಪಿಸಲು ಕಸಾಪ ಸಿದ್ಧ,” ಎಂದರು.

”81 ನೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಕುರಿತಂತೆ ಒಂದು ನಿರ್ಣಯವನ್ನು ಕೈಗೊಳ್ಳಲಾಗುವುದು. ಜತೆಗೆ ಕಡ್ಡಾಯಗೊಳಿಸದೇ ಇದ್ದರೆ ಮುಂದಿನ ಸಮ್ಮೇಳನ ನಡೆಸುವುದಿಲ್ಲ ಎಂಬ ನಿರ್ಣಯ ಕೈಗೊಂಡು ಸರಕಾರಕ್ಕೆ ಸಂದೇಶ ರವಾನಿಸಲಾಗುವುದು,” ಎಂದರು.

”ಸಮ್ಮೇಳನದ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೂ ಈ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ರಾಜ್ಯವನ್ನು ಪ್ರತಿನಿಧಿಸುವ ಮೂವರು ಕೇಂದ್ರ ಸಚಿವರನ್ನು ಆಹ್ವಾನಿಸಿ ಪ್ರಧಾನಮಂತ್ರಿ ಅವರ ಮೇಲೆ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಒತ್ತಡ ಹೇರಲು ಕನ್ನಡಿಗರ ಬೇಡಿಕೆಯನ್ನು ಮಂಡಿಸಲಾಗುವುದು. ಶಿಕ್ಷಣದಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕಾಗಿ ಪರಿಷತ್ತಿನಲ್ಲಿ ಸಮಿತಿಯೊಂದನ್ನು ರಚಿಸಲು ಕಾರ್ಯಕಾರಿ ಸಮಿತಿ ಸಭೆ ನಿರ್ಣಯಿಸಿದೆ,” ಎಂದರು.

”ಕನ್ನಡ ಭಾಷೆ ಅನುಷ್ಠಾನದ ಜನಾಂದೋಲನಕ್ಕೆ ರಾಜ್ಯ ಸರಕಾರವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಈ ವಿಷಯದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿದ್ದು, ಈಗಾಗಲೇ ಪ್ರಧಾನಮಂತ್ರಿ ಹಾಗೂ ನಾನಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಕೇಂದ್ರ-ರಾಜ್ಯ ಸರಕಾರಗಳು ಸ್ಪಂದಿಸದೇ ಇದ್ದಲ್ಲಿ ಜನರನ್ನು ಸಂಘಟಿಸಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ,”ಎಂದರು.

Write A Comment