ಕರ್ನಾಟಕ

ಬೆಳಗಾವಿಯಲ್ಲಿ ಶೀಘ್ರ ಕೆಎಟಿ ಪೀಠ: ಸಿ.ಎಂ

Pinterest LinkedIn Tumblr

pvec23Siddaramaiah

ನವದೆಹಲಿ: ಬೆಳಗಾವಿಯಲ್ಲಿ ಶೀಘ್ರವೇ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಪೀಠ ಸ್ಥಾಪಿಸ­ಲಾ­ಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಹೇಳಿದರು.

ರಾಜ್ಯದಲ್ಲಿ ಬಾಕಿ ಉಳಿದಿರುವ ಯೋಜ­ನೆಗಳ ಬಗ್ಗೆ ಚರ್ಚಿಸಲು ರಾಜ್ಯ­ವನ್ನು ಪ್ರತಿನಿಧಿಸುವ ಸಂಸದರಿಗೆ ಔತಣ­ಕೂಟ ಏರ್ಪಡಿಸಿದ್ದ ಸಂದರ್ಭ­ದಲ್ಲಿ ಅವರು ಸುದ್ದಿಗಾರರ ಜತೆ ಮಾತ­ನಾಡಿ ಈ ವಿಷಯ ತಿಳಿಸಿದರು.

ಬೆಳಗಾವಿ ಜಿಲ್ಲೆಯ ವಕೀಲರು ನಡೆಸು­ತ್ತಿರುವ ಪ್ರತಿಭಟನೆ ಕೈಬಿಡಲು ಮನವಿ ಮಾಡಿದ ಅವರು, ಕೆಎಟಿ ಪೀಠಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕ್ರಮಗಳನ್ನು ತೆಗೆದುಕೊಳ್ಳ­ಲಾಗುವುದು. ಈ ವಿಷಯವನ್ನು ಶೀಘ್ರವೇ ಸಚಿವ ಸಂಪುಟದ ಮುಂದಕ್ಕೆ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ರೈಲ್ವೆ ಯೋಜನೆ: ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳಿಗೆ ಬೇಕಾದ ಹಣ ಹಾಗೂ ಉಚಿತ ಭೂಮಿಯನ್ನು ಒಪ್ಪಂದದ ಪ್ರಕಾರ ಒದಗಿಸಲು ಸರ್ಕಾರ ಬದ್ಧವಾ­ಗಿದೆ. ರಾಜ್ಯದಲ್ಲಿ ೧೪ ಯೋಜನೆಗಳಿಗೆ ರೈಲ್ವೆ ಇಲಾಖೆ ಮಂಜೂರಾತಿ ನೀಡಿದ್ದು ಇವುಗಳಿಗೆ ಶೇ ೫೦ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು.

ಕಲಬುರ್ಗಿ ಇಎಸ್‌ಐ ಆಸ್ಪತ್ರೆಯ ಖಾಲಿ ಹುದ್ದೆಗಳನ್ನು ತುಂಬಲಾಗು­ವುದು. ದಾವಣಗೆರೆ, ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಇಎಸ್‌ಐ ಆಸ್ಪತ್ರೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಸಂಬಂಧ ಕಸ್ತೂರಿ ರಂಗನ್‌ ವರದಿಯ ಬಗ್ಗೆ ರಾಜ್ಯ ಸರ್ಕಾರ ಡಿ.೧೫ರೊಳಗೆ ತನ್ನ ಅಭಿಪ್ರಾಯವನ್ನು ಸಲ್ಲಿಸಬೇಕಿದ್ದು, ಈ ಗಡುವನ್ನು ಮಂದೂಡಲು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಈ ವರದಿ ಬಗ್ಗೆ ಅಂತಿಮ ಅಭಿಪ್ರಾಯಕ್ಕೆ ಬರಲಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ಎತ್ತಿನಹೊಳೆ ಜಾರಿಗೊಳಿಸಿದರೆ ಅದರಿಂದ ದಕ್ಷಿಣ ಕನ್ನಡದ ಪರಿಸರದ ಮೇಲೆ ದುಷ್ಪರಿ­ಣಾಮ ಬೀರುತ್ತದೆ ಎಂಬ ಭಯವನ್ನು ಹೋಗಲಾಡಿಸಲು ಮಂಗಳೂರಿನಲ್ಲಿ ಜನಪ್ರತಿ­ನಿಧಿಗಳನ್ನು ಒಳಗೊಂಡ ಸಭೆಯನ್ನು ನಡೆಸಲಾಗುವುದು ಸಿಎಂ ಹೇಳಿದರು.

Write A Comment