ಮಂಗಳೂರು,ಡಿ.04: ಸರಕಾರಿ ಅಥವಾ ಖಾಸಗಿ ಕಟ್ಟಡಗಳ ಲಿಫ್ಟ್ಗಳಲ್ಲಿ ನಿರ್ವಹಣೆ ಮಾಡುವ ಕೆಲಸವನ್ನು ವಿಕಲಚೇತನರಿಗೆ ಮಾತ್ರ ಕೊಟ್ಟರೆ ಉತ್ತಮ. ಈ ಬಗ್ಗೆ ಅಧಿವೇಶನದಲ್ಲಿ ಮಂಡಿಸಿ ನಿರ್ದೇಶನ ಹೊರಡಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಶಾಂತಿ ನಿಲಯದಲ್ಲಿ ಬುಧವಾರ ವಿಶ್ವ ವಿಕಲಚೇತನರ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಿನ್ನ ಸಾಮರ್ಥ್ಯದವರಿಗೆ ಸರಕಾರ ನೀಡುವ ಯೋಜನೆಗಳು ದುರುಪ ಯೋಗ ಆಗಬಾರದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಘ ಸಂಸ್ಥೆಗಳು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದರಿಂದ ಯಾವುದೇ ಯೋಜನೆ ದುರುಪಯೋಗ ಆಗುತ್ತಿಲ್ಲ ಎಂದರು.
ಮೇಯರ್ ಮಹಾಬಲ ಮಾರ್ಲ ಮಾತನಾಡಿ, ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದು. 42 ಲಕ್ಷ ಮೊತ್ತದ ಸವಲತ್ತು ವಿತರಣೆ: ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ 42 ಲಕ್ಷ ರೂ. ಮೊತ್ತದ ವಿವಿಧ ಸೌಲಭ್ಯಗಳನ್ನು ಸರಕಾರದ ವತಿಯಿಂದ ವಿತರಿಸಲಾಯಿತು.
ಮೂರು ಮಂದಿಗೆ ಟೈಲರಿಂಗ್ ಮೆಶಿನ್, ನಾಲ್ಕು ಮಂದಿಗೆ ಉನ್ನತ ಶಿಕ್ಷಣ ಶುಲ್ಕ ಮರುಪಾವತಿ ಮೊತ್ತ, ಒಂಬತ್ತು ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಕಲಚೇತನರ ಜತೆ ವಿವಾಹವಾದ ಇಬ್ಬರಿಗೆ ತಲಾ 50 ಸಾವಿರ ರೂ., ನಾಲ್ಕು ಮಂದಿಗೆ ಆಧಾರ ಯೋಜನೆ ವಿತರಿಸಲಾಯಿತು. 10 ಮಂದಿಗೆ ಗಾಲಿಕುರ್ಚಿ, ಒಬ್ಬರಿಗೆ ಊರುಗೋಲು, ಐದು ಮಂದಿಗೆ ತ್ರಿಚಕ್ರ ವಾಹನ, ಏಳು ಮಂದಿಗೆ ಶ್ರವಣ ಸಾಧನ ಹಾಗೂ ಒಬ್ಬರಿಗೆ ಬ್ರೈಲ್ ವಾಚ್ ವಿತರಿಸಲಾಯಿತು.


















