ಬಾರಾಬಂಕಿ, ನ.22:ಸಮಾಜವಾದಿ ಪಕ್ಷದ ಶಾಸಕರು, ಸಂಸದರು ಪದೇ ಪದೇ ವಿವಾದ ಸೃಷ್ಟಿಸುತ್ತಿದ್ದು, ಈಗ ಸಮಾಜವಾದಿ ಪಕ್ಷದ ಶಾಸಕರೊಬ್ಬರು ರಸ್ತೆ ಶುಲ್ಕ ಸಂಗ್ರಹ ಕೇಂದ್ರದ ಸಿಬ್ಬಂದಿಗಳ ಮೇಲೆ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ಹೊಸ ವಿವಾದ ಹುಟ್ಟುಹಾಕಿದೆ. ಗೋಸಾಯಿ ಗಂಜ್ ಕ್ಷೇತ್ರದ ಶಾಸಕ ಅಭಯ್ಸಿಂಗ್ ಬೆಂಬಲಿಗರು ಬಾರಾಬಂಕಿ ಜಿಲ್ಲೆಯ ಅಹಮದ್ಪುರ್ ಟೋಲ್ ಸಂಗ್ರಹ ಕೇಂದ್ರದ ಬಳಿ ರಾದ್ಧಾಂತ ಸೃಷ್ಟಿಸಿದ್ದಾರೆ.
ನಿನ್ನೆ ಬೆಳಗ್ಗೆ 11 ಗಂಟೆ ಸಮಯದಲ್ಲಿ ಅಭಯ್ಸಿಂಗ್ ಅವರು ಕುಳಿತಿದ್ದ ಸ್ಕಾರ್ಪಿಯೋ ಕಾರು ಟೋಲ್ನ ರಾಂಗ್ಸೈಡ್ನಲ್ಲಿ ನುಗ್ಗಲು ಯತ್ನಿಸಿದೆ. ಸಿಬ್ಬಂದಿಗಳು ಕಾರನ್ನು ತಡೆದು ಸರಿದಾರಿಯಲ್ಲಿ ಬರುವಂತೆ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರೊಂದಿಗಿದ್ದ ಬೆಂಬಲಿಗರು ಟೋಲ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದು, ಕಾವೇರಿದ ವಾತಾವರಣ ನಿರ್ಮಾಣವಾಗಿದೆ.
ತಕ್ಷಣವೇ ಇನ್ನೂ ಮೂರು ಫ್ಯಾರ್ಚ್ಯುನರ್ ಕಾರಿನಲ್ಲಿ ಸ್ಥಳಕ್ಕಾಗಮಿಸಿದ ಶಾಸಕರ ಬೆಂಬಲಿಗರು ಟೋಲ್ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಅದರಲ್ಲೂ ಒಬ್ಬ ಬೆಂಬಲಿಗ ದೊಣ್ಣೆ ಹಿಡಿದು ಅಸಹಾಯಕ ಟೋಲ್ ಸಿಬ್ಬಂದಿಯನ್ನು ದನದ ಹಾಗೆ ಬಡಿಯುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಮ್ ಸಿಂಗ್ ಯಾದವ್ ಅವರ ಜನ್ಮದಿನಾಚರಣೆಗೆ ತಾಲಿಬಾಲ್ ಉಗ್ರರಿಂದ ಹಣ ಪಡೆಯುತ್ತಿರುವುದಾಗಿ ಶಾಸಕ ಅಜಂಖಾನ್ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಶಾಸಕ ಅಭಯ್ಸಿಂಗ್ ಬೆಂಬಲಿಗರು ಮತ್ತೊಂದು ರಾದ್ಧಾಂತ ಮಾಡಿದ್ದಾರೆ. ಹಾಡಹಗಲೇ ಜನ ನೋಡುತ್ತಿರುವಾಗಲೇ ಮಾರಕಾಯುಧಗಳನ್ನು ಹಿಡಿದು ಹಲ್ಲೆ ನಡೆಸಿರುವುದು ತೀವ್ರ ವಿವಾದ ಸೃಷ್ಟಿಸಿದೆ.