ಉಡುಪಿ: ಕ್ರೈಸ್ತ ಯುವಜನರು ಯೇಸು ಸ್ವಾಮಿ ತೋರಿಸಿದ ಮಾರ್ಗದಲ್ಲಿ ನಡೆದು ಜಗತ್ತಿಗೆ ಬೆಳಕು ನೀಡುವ ದೀಪಗಳಾಗಿ ಕಂಗೊಳಿಸಬೇಕು ಎಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ ಅನಿಲ್ ಡಿ’ಸೋಜಾ ಹೇಳಿದರು.
ಅವರು ಭಾನುವಾರ ಕುಂದಾಪುರ ಸೈಂಟ್ ಮೇರಿಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಇದರ ವಲಯ ಯುವ ಸಮಾವೇಶ “ಯುವಸಮಾಗಮ” ಉದ್ಘಾಟಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ಯುವ ನಾಯಕತ್ವದ ಅಗತ್ಯ ಹೆಚ್ಚಿದ್ದು ಯುವಜನತೆ ತಮ್ಮಲ್ಲಿರುವ ಪ್ರತಿಭೆಗಳನ್ನು ಸದುಪಯೋಗಗೊಳಿಸಿ ಸಮಾಜದ ಉತ್ತಮ ನಾಗರಿಕರಾಗುವುದರೊಂದಿಗೆ ಪರಸ್ಪರ ದ್ವೇಷದ ಗೋಡೆಗಳನ್ನು ಕಟ್ಟುವ ಬದಲು ಪ್ರೀತಿಯ ಸೇತುವೆಯಾಗುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಹೊಲಿ ರೋಜರಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ಸನ್ ಡಿ’ಆಲ್ಮೇಡಾ ಮಾತನಾಡಿ ಯುವಜನರು ಇಂದು ಸಾಮಾಜಿಕ ಜವಾಬ್ದಾರಿಗಳನ್ನು ಮರೆಯದೆ ತಮ್ಮಿಂದಾಗುವ ಸೇವೆಯನ್ನು ಸಮಾಜಕ್ಕೆ ನೀಡಲು ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದರು.
ಸಮಾವೇಶದಲ್ಲಿ ಯುವಜನರಿಗೆ ನಾಯಕತ್ವದ ಮಹತ್ವ ಹಾಗೂ ಕುಟುಂಬದಲ್ಲಿ ಯುವಜನತೆಯ ಪಾತ್ರ ಕುರಿತಾದ ಕಾರ್ಯಾಗಾರಗಳು ಜರುಗಿದವು. ಕುಂದಾಪುರ ವಲಯ ವ್ಯಾಪ್ತಿಯ ೧೦ ಚರ್ಚುಗಳಿಂದ ಯುವಜನರು ಸಮಾವೇಶದಲ್ಲಿ ಭಾಗವಹಿಸಿದರು.
ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶಕರಾದ ವಂ. ಎಡ್ವಿನ್ ಡಿ’ಸೋಜಾ, ವಲಯ ನಿರ್ದೇಶಕ ವಂ ಪ್ರಕಾಶ್ ಡಿ’ಸೋಜಾ, ಕೇಂದ್ರಿಯ ಸಮಿತಿಯ ಪದಾಧಿಕಾರಿಗಳಾದ ಟೀನಾ ಮಚಾದೊ ಉದ್ಯಾವರ, ಒಲಿಂಪನ್ ಡಿಮೆಲ್ಲೊ, ವಲಯ ಸಮಿತಿಯ ನೊಯೆಲ್ ಒಲಿವೇರಾ ಉಪಸ್ಥಿತರಿದ್ದರು. ವಲಯ ಸಮಿತಿಯ ಅಧ್ಯಕ್ಷೆ ಡ್ರೀಮಾ ಸ್ವಾಗತಿಸಿ, ಫಿಯೋಲಾ ಮಿನೇಜಸ್ ವಂದಿಸಿದರು


