ಕರ್ನಾಟಕ

ನವದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ವಿಜೃಂಭಿಸಿದ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧ ಚಿತ್ರ

Pinterest LinkedIn Tumblr

ನವದೆಹಲಿ: 74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು.

ಪರೇಡ್ ನಲ್ಲಿ ಕರ್ನಾಟಕದಿಂದ ನಾರಿ ಶಕ್ತಿ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಗಿತ್ತು. ಸ್ತಬ್ಧ ಚಿತ್ರದ ಮೂಲಕ ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ನಡೆದಿದೆ. ಗಿಡ-ಮರ ,ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿತ್ತು.

ಮುಂಭಾಗದಲ್ಲಿ ಹೆರಿಗೆ ತಜ್ಞೆ ಸೂಲಗಿತ್ತಿ ನರಸಮ್ಮ ಚಿತ್ರ, ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತಹ ಚಿತ್ರ ಪ್ರದರ್ಶನಗೊಂಡಿದೆ. ಬಳಿಕ ಹಾಲಕ್ಕಿ ಸಮುದಾಯದ ವೃಕ್ಷ ಮಾತೆ ಎಂದು ಜನಜನಿತರಾದ ತುಳಸಿ ಗೌಡ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಸ್ತಬ್ದಚಿತ್ರಗಳಿತ್ತು.

ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ ‘ನಾರಿ ಶಕ್ತಿ’ ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ” ಎಂದು ವ್ಯಾಖ್ಯಾನಿಸಿದ್ದಾರೆ.

Comments are closed.