ಕರಾವಳಿ

ಬೈಂದೂರು ಸರಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಸಾರ್ವಜನಿಕರು..!(Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ಪ್ರತಿಭಟನೆ ಹಾಗೂ ಧರಣಿಯು ಡಿ.3 ಶುಕ್ರವಾರ ಸರಕಾರಿ ಆಸ್ಪತ್ರೆ ಎದುರು ನಡೆದಿದ್ದು ಮುಖ್ಯ ವೈದ್ಯಾಧಿಕಾರಿ ವಿರುದ್ಧ ನಾಗರಿಕರು‌ ಆಕ್ರೋಷ ವ್ಯಕ್ತಪಡಿಸಿದರು. ಸರಕಾರಿ‌ ಆಸ್ಪತ್ರೆ ಎದುರು ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಬೈಂದೂರು‌ ಪೇಟೆ ಮೂಲಕವಾಗಿ ಮೆರವಣಿಗೆ ಮೂಲಕ ಬೈಂದೂರು ತಾಲೂಕು ದಂಡಾಧಿಕಾರಿ ಕಚೇರಿ ತನಕ‌ ಸಾಗಿ ಬಂದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂಪರ ಸಂಘಟನೆ ಮುಖಂಡ ಶ್ರೀಧರ್ ಬಿಜೂರು, ಮೂಲಭೂತ ಹಕ್ಕುಗಳಲ್ಲಿ ಒಂದಾದ ಆರೋಗ್ಯ ವಿಚಾರದಲ್ಲಿ ಸಂಘಟಿತ ಹಾಗೂ ಸಾಮೂಹಿಕ ಹೋರಾಟ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ನಡೆಯುತ್ತಿದೆ. ಹಣ, ಜಾತಿ, ಅಧಿಕಾರದ ಬಲದಿಂದ ಹೋರಾಟವನ್ನು ತಡೆಯುವ ಯಾವುದೇ ಪ್ರಯತ್ನ ಫಲಕಾರಿಯಾಗುವುದಿಲ್ಲ. ಹೋರಾಟಗಾರರನ್ನು ಕಿಡಿಗೇಡಿ ಎನ್ನುವ ವೈದ್ಯಾಧಿಕಾರಿಯವರು ತಮ್ಮ ಹೊಣೆಗೇಡಿತನವನ್ನು ಪ್ರದರ್ಶಿಸಿದ್ದಾರೆ. ಬೈಂದೂರು ಸಮುದಾಯ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯವರು ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ನೀಡಲು ಲಭ್ಯರಿರುವುದಿಲ್ಲ. ಹೆಚ್ಚಿನ ಸಮಯವನ್ನು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ನಲ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಬರುವ ರೋಗಿಗಳಿಗೆ ಅನಾನುಕೂಲವಾಗುತ್ತಿದೆ. ಇಲ್ಲಿನ ಓರ್ವ ಸಿಬ್ಬಂದಿ ಪ್ರಂಟ್ ಲೈನ್ ವಾರಿಯರ್ ಆದರೂ ಕೂಡ ಇನ್ನೂ ವಾಕ್ಸಿನ್ ಪಡೆಯಲಿಲ್ಲ ಎಂದು ಆರೋಪಿಸಿದ ಅವರು ಆಸ್ಪತ್ರೆಗೆ ಪೂರ್ಣಾವಧಿ ಪ್ರಸೂತಿ ತಜ್ಞರನ್ನು ನಿಯೋಜಿಸಬೇಕು. ಆಂಬುಲೆನ್ಸ್ ಅವ್ಯವಸ್ಥೆ ಸರಿಪಡಿಸಬೇಕು. ಬೈಂದೂರು ಸರಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಕಾರಣರಾದವರನ್ನು ಶೀಘ್ರ ವರ್ಗಾವಣೆಯಾಗಬೇಕು. ಹತ್ತು‌ದಿನದೊಳಗೆ ಈ‌ ಸಮಸ್ಯೆ ಬಗೆಹರಿಯದಿದ್ದರೆ ಉಘ್ರ ಹೋರಾಟ ಖಚಿತ ಎಂದು‌ ಎಚ್ಚರಿಕೆ ನೀಡಿದರು.

ಯಡ್ತರೆ ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಪೂಜಾರಿ ಮಾತನಾಡಿ, ಬೈಂದೂರು ತಾಲೂಕು ಕೇಂದ್ರವಾಗಿದ್ದು ಹಲವು ಗ್ರಾಮಗಳನ್ನೊಳಗೊಂಡಿದೆ. ಇಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ಜನಸಾಮಾನ್ಯರು ಹಾಗೂ ಬಡ ಅನಾರೋಗ್ಯ ಪೀಡಿತರಿಗೆ ಸೂಕ್ತ ಗುಣಮಟ್ಟದ ಚಿಕಿತ್ಸೆ, ತುರ್ತುಚಿಕಿತ್ಸೆ ಒದಗಿಸುವಲ್ಲಿ ತೀವೃ ನಿರ್ಲಕ್ಷ ವಹಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ನಾಲ್ಕು ಅಂಬುಲೆನ್ಸ್ ವಾಹನ ಇದ್ದರೂ ಅದಕ್ಕೆ ಚಾಲಕರಿಲ್ಲ. ಸರಕಾರ ನೀಡಿದ ಸೌಕರ್ಯಗಳ ನಿರ್ವಹಣೆಯಲ್ಲಿ ಕೂಡ ಇಲ್ಲಿನ ಆಡಳಿತ ವೈದ್ಯಾಧಿಕಾರಿ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆಸ್ಪತ್ರೆಗೆ ಡಯಾಲಿಸಿಸ್, ಸ್ಕ್ಯಾನಿಂಗ್ ಯುನಿಟ್ ಮೊದಲಾದವುಗಳ ಅಗತ್ಯವಿದ್ದು ಇದನ್ನೆಲ್ಲಾ ಒದಗಿಸಿ ಜನರಿಗೆ 24 ಗಂಟೆಗಳ ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಉಡುಪಿ‌ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ, ಜಿಲ್ಲಾ ಪ್ರಭಾರ ಡಿ.ಎಚ್.ಒ ಡಾ. ರಾಮರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಮುಖಂಡ ವೀರಭದ್ರ ಗಾಣಿಗ, ಸಾಮಾಜಿಕ‌ ಕಾರ್ಯಕರ್ತರಾದ ನವೀನ್ ಚಂದ್ರ ಉಪ್ಪುಂದ, ಅಕ್ಷಯ ಶೆಟ್ಟಿ ತೆಗ್ಗರ್ಸೆ, ಸುಬ್ರಮಣ್ಯ ಬಿಜೂರು, ಸಿಐಟಿಯು ಮುಖಂಡ ವೆಂಕಟೇಶ ಕೋಣಿ ಮಾತನಾಡಿದರು. ದಲಿತ ಸಂಘರ್ಷ ‌ಸಮಿತಿ ಭೀಮಘರ್ಜನೆ ಉಪ್ಪುಂದದ ರಾಮ ಹಾಗೂ ಪದಾಧಿಕಾರಿಗಳು‌, ಈ ಭಾಗದ ಪ್ರಮುಖರಾದ ವೇದನಾಥ್ ಶೆಟ್ಟಿ ಹೆರಂಜಾಲು, ರಾಜೇಶ್ ಬೈಂದೂರು, ಪ್ರಸಾದ್ ಪಿ. ಬೈಂದೂರು, ಶರತ್ ಮೋವಾಡಿ, ಉಮೇಶ್ ಬಿಜೂರು, ವಿವಿಧ ಪಕ್ಷಗಳ‌ ಮುಖಂಡರು ಇದ್ದರು.

Comments are closed.