ಕುಂದಾಪುರ: ಶನಿವಾರ ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೃತ ವ್ಯಕ್ತಿಗಳ ಮಕ್ಕಳು ಅಂತ್ಯ ಸಂಸ್ಕಾರಕ್ಕೆ ಬಂದರೆ ಮತ್ತು ತುಂಬು ಗರ್ಬಿಣಿಯರು ಗಡಿಯಿಂದ ಜಿಲ್ಲೆಯೊಳಕ್ಕೆ ಬರುವ ಸಂದರ್ಭ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಒಳಬಿಡಲು ಸೂಚನೆ ನೀಡಲಾಗಿದ್ದು ಉಳಿದಂತೆ ಗಡಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಕಾಸರಗೋಡಿನಲ್ಲಿ ಒಂದೇ ದಿನ ಹಲವು ಕೊರೋನಾ ಪಾಸಿಟಿವ್ ಪ್ರಕರಣವಾದ್ದರಿಂದ ಕೇರಳ ಗಡಿ ಮುಚ್ಚುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ….
ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸಿದ ಸಚಿವರು, ಕೊರೋನಾದಂತಹ ಈ ಸಂದರ್ಭ ಲಾಕ್ ಡೌನ್ ನಿಯಮಪಾಲನೆ ಅಗತ್ಯ. ಸಾಮಾಜಿಕ ಅಂತರ ಕಾಯ್ದುಕೊಂಡು 8-10 ಜನರಿದ್ದು ಮದುವೆ ಮಾಡಿದರೆ ತೊಂದರೆಯಿಲ್ಲ. ನಿಖಿಲ್ ಕುಮಾರ್ ಸ್ವಾಮಿ ಮದುವೆಯಲ್ಲಿ ಎಷ್ಟು ಜನರಿದ್ದಾರೆ ಎಂದು ನೋಡಿಯೇ ಇಲ್ಲ ಅಂತ ರಾಜ್ಯ ಮೀನುಗಾರಿಕಾ ಸಚಿವರು ಹೇಳಿದ್ದಾರೆ.
ಯಕ್ಷಗಾನ ಕಲಾವಿದರ ಸಮಸ್ಯೆ ಬಗೆಹರಿಸುವೆ….
ಯಕ್ಷಗಾನ ಕಲಾವಿದರ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲಾ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಮೇಳಗಳಲ್ಲಿರುವ ಕಲಾವಿದರಿಗೆ ವೇತನ ಕಡಿತಗೊಳಿಸದೆ ನೀಡಲು ಆದೇಶಿಸಲಾಗಿದೆ. ಪೆರ್ಡೂರು ಮತ್ತು ಸಾಲಿಗ್ರಾಮ ಮೇಳಕ್ಕೂ ಮತ್ತು ದೇವಸ್ಥಾನಕ್ಕೂ ನೇರ ಸಂಬಂಧಗಳಿಲ್ಲ. ಆ ಸಮಸ್ಯೆ ನಿವಾರಣೆಗೆ ಕಲಾವಿದರು ಮನವಿ ನೀಡಿದ್ದು ಸೂಕ್ತ ಕ್ರಮಕೈಗೊಳ್ಳುತ್ತೇವೆಂದರು.
ರಾಜ್ಯದ ಗೃಹಮಂತ್ರಿಗಳು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಅವರಿಗೆ ಹಲವು ಜವಬ್ದಾರಿಗಳಿರುತ್ತದೆ. ಆಯಾಯಾ ಜಿಲ್ಲೆಯಲ್ಲಿ ಕ್ಷೇತ್ರಗಳ ಶಾಸಕರು, ಸಂಸದರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತವೂ ಕೂಡ ಎಲ್ಲಾ ಮುನ್ನಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಪೊಲೀಸರು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.
Comments are closed.