ಉಡುಪಿ: ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಮಹಿಳೆಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರದ ಕೌಶಲ್ಯ ಬಂಧಿತ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಕೆ 2023ರ ನವೆಂಬರ್ ನಲ್ಲಿ ಬ್ರಹ್ಮಾವರದ ಹೇರಾಡಿಯ ಮಹಿಳೆಯೊಬ್ಬರಿಗೆ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಿಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ಮಹಿಳೆ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬವರಿಗೆ ಒಟ್ಟು 80,72,000ರೂ. ಹಣ ನೀಡಿದ್ದರು ಎಂದು ದೂರಲಾಗಿದೆ.
ಅದೇ ರೀತಿ ಆರೋಪಿ ಕೌಶಲ್ಯ, ಇನ್ನೋರ್ವ ಮಹಿಳೆಗೂ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ ಖಾತೆಗಳಿಗೆ 65,00,000ರೂ. ನಗದು ಹಣವನ್ನು ಪಾವತಿಸಿದ್ದರು. ಕೌಶಲ್ಯ ಇವರಿಬ್ಬರಿಗೆ ಒಟ್ಟು 4 ಕೋಟಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಹಾಗೂ ಬ್ಯಾಂಕ್ ನೌಕರ ಎಂದು ಪೋನ್ನಲ್ಲಿ ಮಾತನಾಡಿ ನಂಬಿಸಿ ಒಟ್ಟು 1,45,72,000. ಹಣ ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.
ಅದರಂತೆ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಕೌಶಲ್ಯಳನ್ನು ಬಂಧಿಸಿದ್ದಾರೆ.
Comments are closed.