ಕರಾವಳಿ

ಗಂಗೊಳ್ಳಿ ನಾಡದೋಣಿ ದುರಂತ ಪ್ರಕರಣ | ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರು ಮೀನುಗಾರರ ಮೃತದೇಹ ಪತ್ತೆ | ಇನ್ನೊಬ್ಬರಿಗೆ ಶೋಧ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಜು.15 ಮಂಗಳವಾರ ಬೆಳಿಗ್ಗೆ ಶ್ರೀ ಹಕ್ರೇಮಠ ಯಕ್ಷೇಶ್ವರಿ ಎಂಬ ಗಿಲ್‌‌ನೆಟ್‌ ನಾಡ ದೋಣಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದಾಗ ಅಲೆಗಳ ಅಬ್ಬರಕ್ಕೆ ಸಿಕ್ಕು ದೋಣಿ ಮಗುಚಿದ್ದರಿಂದ ಮೂವರು ನೀರು ಪಾಲಾಗಿದ್ದು ಬುಧವಾರದಂದು ಇಬ್ಬರು ಮೀನುಗಾರರ ಮೃತದೇಹ ಪತ್ತೆಯಾಗಿದೆ.

(ಮೃತ ಮೀನುಗಾರರಾದ ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ)

ಬುಧವಾರ ನಸುಕಿನ ವೇಳೆ ಕುಂದಾಪುರ ಕೋಡಿ ಸಮೀಪದ ಲೈಟ್‌ಹೌಸ್ ಬಳಿ ಸಮುದ್ರ ತೀರದಲ್ಲಿ ಗಂಗೊಳ್ಳಿಯ ಬೇಲಿಕೇರಿಯ ದಿ. ನಾರಾಯಣ ಅವರ ಪುತ್ರ ಲೋಹಿತ್ ಖಾರ್ವಿ (39) ಎನ್ನುವರ ಮೃತದೇಹ ಪತ್ತೆಯಾಗಿದ್ದು ಸಂಜೆ ಸುಮಾರಿಗೆ ಕೋಟೇಶ್ವರ ಸಮೀಪದ ಹಳೆಅಳಿವೆ ಎಂಬಲ್ಲಿ ಗಂಗೊಳ್ಳಿಯ ದಿ. ಶೀನ ಖಾರ್ವಿ ಎನ್ನುವರ ಪುತ್ರ ಜಗನ್ನಾಥ ಖಾರ್ವಿ (50) ಅವರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಇನ್ನೋರ್ವ ಮೀನುಗಾರ ಸುರೇಶ್ ಖಾರ್ವಿ(48) ಸುಳಿವು ಬುಧವಾರ ರಾತ್ರಿವರೆಗೆ ಸಿಕ್ಕಿಲ್ಲ.

ನಿರಂತರ ಶೋಧ ಕಾರ್ಯ:
ದೋಣಿ ದುರಂತದಲ್ಲಿ ಸಂತೋಷ್ ಖಾರ್ವಿ (35) ಎನ್ನುವರು ರಕ್ಷಣೆಯಾಗಿದ್ದು ಮೂವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಹಲವು ಗಂಟೆಗಳ ಬಳಿಕ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಘಟನೆ ಮಾಹಿತಿ ಸಿಗುತ್ತಲೇ ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಮೀನುಗಾರರು ದೌಡಾಯಿಸಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು 2ನೇ ದಿನವಾದ ಬುಧವಾರವೂ ಕಾರ್ಯಾಚರಣೆ‌ ಮುಂದುವರೆದಿತ್ತು. ಕಳೆದೆರಡು ದಿನಗಳಿಂದ ಭಾರಿ ಮಳೆ-ಗಾಳಿಯೂ ಇರುವುದರಿಂದ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳಿದ್ದು ಶೋಧ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಆಧುನಿಕ ತಂತ್ರಜ್ಞಾನದ 5 ಕಿ.ಮೀ. ವ್ಯಾಪ್ತಿಯ ದೂರ ಸೆರೆಹಿಡಿಯುವ ಡ್ರೋಣ್ ಕ್ಯಾಮೆರಾ ಬಳಸಿಯೂ ಕಾರ್ಯಾಚರಣೆ ನಡೆಸಿದ್ದರು.

ಶಾಸಕ‌ ಗುರುರಾಜ ಗಂಟಿಹೊಳೆ ಭೇಟಿ: ದೋಣಿ ದುರಂತದ ಸ್ಥಳಕ್ಕೆ ಬುಧವಾರ ಬೆಳಗ್ಗೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯ ಮೀನುಗಾರರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದುಡಿದು ಬದುಕುವವರ ಬಾಳಲ್ಲಿ ಆಘಾತ ಉಂಟಾಗಿದೆ. ಹೊಟ್ಟೆಪಾಡಿಗಾಗಿ ತೆರಳಿದ್ದರು. ಮೀನುಗಾರರು ಬೋಟು, ದೋಣಿಯಲ್ಲಿ ಕಡಲಿಗೆ ಇಳಿಯುವಾಗ ಜೀವ ರಕ್ಷಕ ಸಾಧನವಾದ ಲೈಫ್ ಜಾಕೆಟ್ ಧರಿಸಬೆಕು. ನಾಪತ್ತೆಯಾದವರ ಪತ್ತೆಗೆ ಕರಾವಳಿ ಕಾವಲು ಪಡೆ, ಪೊಲೀಸರ ತಂಡ, ಮುಳುಗು ತಜ್ಞರು, ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ, ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಇಬ್ಬರು ಮೀನುಗಾರರ ಮೃತದೇಹಗಳು ಬೇರೆಬೇರೆ ಕಡೆ ಪತ್ತೆಯಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗಂಗೊಳ್ಳಿ ಹಾಗೂ ಜಿಲ್ಲಾ ಕೇಂದ್ರದ ಸುಮಾರು 30 ಕ್ಕೂ ಅಧಿಕ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಕಾರ್ಯಾಚರಣೆ ಸಲುವಾಗಿ ಜೆಟ್ ಸ್ಕೀ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ಡ್ರೋಣ್ ಕ್ಯಾಮೆರಾ ಕೂಡ ಬಳಸಲಾಗಿತ್ತು. ಸ್ಥಳೀಯ ಮೀನುಗಾರರು, ನುರಿತ ಈಜುಪಟುಗಳನ್ನು ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸಲಾಗುತ್ತಿದೆ.
– ಮಿಥುನ್ ಎಚ್.ಎನ್. (ಪೊಲೀಸ್ ಅಧೀಕ್ಷಕರು, ಉಡುಪಿ ಕರಾವಳಿ ಕಾವಲು ಪಡೆ)

Comments are closed.