ಕರಾವಳಿ

ಉಡುಪಿ ಜಿಲ್ಲೆಯ ಸಂನ್ಯಾಸಿಬೆಟ್ಟಿನಲ್ಲಿ11ನೇ ಶತಮಾನದ ಕಲಾತ್ಮಕ ಉಮಾಮಹೇಶ್ವರ ಶಿಲ್ಪ ಪತ್ತೆ

Pinterest LinkedIn Tumblr

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮಾರಣಕಟ್ಟೆಯ ಸಂನ್ಯಾಸಿಬೆಟ್ಟಿನಲ್ಲಿ ಅತ್ಯಂತ ಕಲಾತ್ಮಕವಾದ ಉಮಾಮಹೇಶ್ವರ ಶಿಲ್ಪ ಪತ್ತೆಯಾಗಿದೆಯೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿಯವರು ತಿಳಿಸಿದ್ದಾರೆ.

ಕೇವಲ 9 ಸೆ.ಮೀ ಎತ್ತರ, 9 ಸೆ.ಮೀ. ಉದ್ದ ಮತ್ತು 4 ಸೆ.ಮೀ. ಅಗಲವಾಗಿರುವ ಈ ಕಿರು ಶಿಲ್ಪ , ತನ್ನ ಕಲಾತ್ಮಕತೆಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ.

ಉಮಯಾ ಸಹ ದೇವೇಶ ನಂದಿವಾಹನ ಮೇವಚ ಎಂಬ ಉಕ್ತಿಯಂತೆ, ಉಮೆಯ ಸಂಗಡ ಮಹೇಶ್ವರ ನಂದಿವಾಹನದ ಮೇಲೆ ತನ್ನ ಎಲ್ಲಾ ಗಣಗಳ ಸಹಿತ ಸವಾರಿ ಮಾಡುವಂತೆ ಶಿಲ್ಪದಲ್ಲಿ ಚಿತ್ರಿಸಲಾಗಿದೆ. ಗಣಪತಿ, ವೀರಭದ್ರ, ಭೃಂಗಿ ಶಿಲ್ಪಗಳನ್ನು ಗುರುತಿಸಬಹುದಾಗಿದೆ, ಉಳಿದ ಶಿಲ್ಪಗಳು ಸವೆದು ಹೋಗಿರುವುದರಿಂದ ಗುರುತಿಸಲು ಸಾದ್ಯವಾಗುವುದಿಲ್ಲ.

ನಂದಿವಾಹನ ಶಿವ ತನ್ನ ಮುಂದಿನ ಎರಡೂ ಕೈಗಳಲ್ಲಿ ನಂದಿಯ ಕಿವಿಗಳನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಆತನ ಹಿಂಬಂದಿಯ ಬಲಗೈಯಲ್ಲಿ ಮೃಗವನ್ನು ಲಾಂಛನವಾಗಿ ಹಿಡಿದಿದ್ದಾನೆ ಎಡಗೈ ಮುರಿದು ಹೋಗಿದೆ. ಆತನ ಹಿಂಭಾಗದಲ್ಲಿ ಕುಳಿತ ಉಮೆ ಶಿವನ ಎರಡೂ ಭುಜಗಳನ್ನು ಹಿಡಿದು ಕೊಂಡಿರುವಂತೆ ಚಿತ್ರಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಉಮೆಯ ಸೊಂಟದ ಮೇಲ್ಭಾಗ ತುಂಡಾಗಿ ಹೋಗಿದೆ.

ಉಮಾಮಹೇಶ್ವರ ಪಂಥವನ್ನು ಸೋಮಪಂಥ ಅಥವಾ ಸೋಮೇಶ್ವರ ಪಂಥವೆಂದು ಕರೆಯಲಾಗುತ್ತದೆ. ಈ ಪಂಥ ಗುಜರಾತಿನಲ್ಲಿ ಸೋಮ ಅಥವಾ ಸೋಮಶರ್ಮ ಎಂಬುವುನಿಂದ ಜನ್ಮತಾಳಿ ದೇಶದಾದ್ಯಂತ ಅತ್ಯಲ್ಪ ಕಾಲದಲ್ಲಿ ಪ್ರಸಿದ್ಧ ಪಂಥವಾಗಿ ಬೆಳವಣಿಗೆ ಹೊಂದಿತು.

ತುಳುನಾಡಿನ ಹಲವು ಕಡೆ ಸೋಮನಾಥ ದೇವಾಲಯ/ಉಮಾಮಹೇಶ್ವರ ದೇವಾಲಯಗಳಿವೆ. ಸುಮಾರು 11ನೇ ಶತಮಾನದಲ್ಲಿ ಈ ಪಂಥ ದಕ್ಷಿಣ ಭಾರತದಲ್ಲಿ ಜನಪ್ರಿಯ ಪಂಥವಾಗಿತ್ತು. ಈ ಶಿಲ್ಪವೂ ಸಹ 11ನೇ ಶತಮಾನದ ಶಿಲ್ಪ ಶೈಲಿಯಲ್ಲಿ ರಚಿತವಾಗಿದೆ ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಈ ಅಧ್ಯಯನದಲ್ಲಿ ನೆರವಾದ ಮುರುಳಿಧರ ಹೆಗಡೆ, ಮಾರಣಕಟ್ಟೆಯ ಶಂಕರ ಭಟ್, ಮಂಜುನಾಥ್ ಭಟ್ ಹಾಗೂ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

Comments are closed.