ಕುಂದಾಪುರ: ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಖರೀದಿಸಿ ಅದನ್ನು ಗೋದಾಮಿಗೆ ತಂದು ಇಂತಿಷ್ಟು ಕೇಜಿಗಳ ಬ್ಯಾಗುಗಳನ್ನಾಗಿಸಿ ಕೇರಳ ಮೊದಲಾದೆಡೆ ಸಾಗಿಸುವ ಬಹುದೊಡ್ಡ ಜಾಲವನ್ನು ಉಡುಪಿ ಡಿಸಿಐಬಿ ಪೊಲೀಸರು ಪತ್ತೆಹಚ್ಚಿದ್ದು ಗುರುವಾರ ಸಂಜೆ ಎರಡು ಗೋದಾಮಿಗೆ ದಾಳಿ ನಡೆಸಿದ ಘಟನೆ ಕೋಟೇಶ್ವರದ ಕಟ್ಕೆರೆ ಸಮೀಪದ ಮೇಪು ಎಂಬಲ್ಲಿ ನಡೆದಿದೆ.
ಈ ಮಿಂಚಿನ ಕಾರ್ಯಾಚರಣೆಯಲ್ಲಿ 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಗೋದಾಮಿನಲ್ಲಿದ್ದ 50 ಟನ್ಗೂ ಅಧಿಕ ಪಡಿತರ ಅಕ್ಕಿ, ಸಾಗಾಟಕ್ಕೆ ಬಳಸುವ ಎರಡು ಲಾರಿ, ಮೂರು ಕಾರುಗಳು, ಬೈಕುಗಳು ಹಾಗೂ ಎರಡು ಲಕ್ಷಕ್ಕೂ ಅಧಿಕ ನಗದು, ಮೊಬೈಲ್ ಫೋನುಗಳು, ಇಲೆಕ್ಟ್ರಿಕಲ್ ತೂಕಮಾಫಕ ವಶಪಡಿಸಿಕೊಳ್ಳಲಾಗಿದೆ. ಇವೆಲ್ಲದರ ಒಟ್ಟು ಮೌಲ್ಯ ಒಂದು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಬಡವರಿಂದ ಖರೀದಿಸಿ ಇತರೆಡೆಗೆ ಮಾರಾಟ ಮಾಡುವ ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿರುವ ಬಗ್ಗೆ ಉಡುಪಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ಬಂದ ಖಚಿತ ವರ್ತಮಾನದಂತೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖಾಧಿಕಾರಿಗಳ ಜೊತೆ ದಾಳಿ ನಡೆಸಿದ್ದು ಈ ವೇಳೆ ಬೃಹತ್ ಜಾಲದ ಬೆಚ್ಚಿಬೀಳಿಸುವ ದಂಧೆ ಬೆಳಕಿಗೆ ಬಂದಿದೆ. ಮನೆಯಂತಿರುವ ಎರಡು ಪ್ರತ್ಯೇಕ ಗೋದಾಮಿನಲ್ಲಿ ಈ ಕಾಳದಂಧೆ ನಡೆಸಲಾಗುತ್ತಿದ್ದು ಅಲ್ಲಲ್ಲಿ ಓಮ್ನಿ ಕಾರು ಮೊದಲಾದ ವಾಹನಗಳಲ್ಲಿ ಹೋಗುವ ಆರೋಪಿಗಳು ಬಡವರಿಗೆ ಹಣದ ಆಮೀಷ ತೋರಿಸಿ ಅವರಿಂದ ಪಡಿತರ ಅಕ್ಕಿಯನ್ನು ಖರೀದಿಸಿ ಗೋದಾಮಿಗೆ ತಂದು ಚೀಲಗಳನ್ನು ಮಾಡಿ ಹೆಚ್ಚಿನ ದರಕ್ಕೆ ಬೇರೆಡೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಉಡುಪಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್., ಕುಂದಾಪುರ ಸಿಪಿಐ ಗೋಪಿಕೃಷ್ಣ, ಪಿಎಸ್ಐ ಸದಾಶಿವ ಗವರೋಜಿ, ಆಹಾರ ಇಲಾಖೆಯ ಪ್ರಭಾರ ಉಪತಹಶಿಲ್ದಾರ್ ಪ್ರಕಾಶ್ ದೇವಾಡಿಗ, ಆಹಾರ ನಿರೀಕ್ಷಕ ಸುರೇಶ್, ಡಿಸಿಐಬಿ ಎಎಸ್ಐ ರವಿಚಂದ್ರ, ಸಂತೋಷ ಕುಂದರ್, ರಾಘವೇಂದ್ರ, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ್, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ, ಚಾಲಕ ರಾಘವೇಂದ್ರ, ಕುಂದಾಪುರ ಪೊಲೀಸ್ ಠಾಣೆ ಹಾಗೂ ವೃತ್ತನಿರೀಕ್ಷಕರ ಕಚೇರಿ ಸಿಬ್ಬಂದಿಗಳು ಮೊದಲಾದವರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.