ಕರಾವಳಿ

ಕೋವಿಡ್-19 ನಿಗ್ರಹಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ : ಸಿಪಿಐಎಂ ಆರೋಪ

Pinterest LinkedIn Tumblr

ಮಂಗಳೂರು : ಕೋವಿಡ್19 ನಿಗ್ರಹಿಸುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಸಂಪೂರ್ಣ ವಿಫಲವಾಗಿರುವುದು ಮಾತ್ರವಲ್ಲದೆ ಲಾಕ್ ಡೌನ್ ಸಂಧರ್ಭದಲ್ಲಿ ಜನರ ಜೀವ ರಕ್ಷಣೆ ಮಾಡುವ ಬದಲು ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ದೇಶ ವಿರೋಧಿಯಾಗಿ ವರ್ತಿಸಿದೆ ಎಂದು ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

CPIM ನೇತ್ರತ್ವದಲ್ಲಿ ದೇಶವ್ಯಾಪಿಯಾಗಿ ನಡೆಯುತ್ತಿರುವ ಪ್ರತಿಭಟನಾ ದಿನಾಚರಣೆಯ ಭಾಗವಾಗಿ ಸೋಮವಾರ ಮಂಗಳೂರಿನ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ 3 ತಿಂಗಳಿನಿಂದ ಜನತೆ ಕೆಲಸವಿಲ್ಲದೆ,ಕೈಯಲ್ಲಿ ಕಾಸಿಲ್ಲದೆ,ತಿನ್ನುವ ಆಹಾರಕ್ಕಾಗಿ ಪರದಾಡು ವಂತಾಗಿದೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಸರಕಾರ ರಾಜಕೀಯ ವಿಚಾರದಲ್ಲೇ ಮಗ್ನವಾಗಿದೆ. ದೇಶವು ಗಂಭೀರ ಸ್ಥಿತಿಯಲ್ಲಿದ್ದಾಗ ನಾಪತ್ತೆಯಾಗಿದ್ದ ಗ್ರಹ ಸಚಿವರು ಈಗ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ ಎಂಬ ಸುದ್ದಿ ತಿಳಿದು ಮತ್ತೆ ಪ್ರತ್ಯಕ್ಷರಾಗಿದ್ದಾರೆ.ಕೋರೋನಾ ವೈರಸ್ ವ್ಯಾಪಕವಾಗಿ ದೇಶದಲ್ಲಿ ಹರಡುತ್ತಿದ್ದರೂ ಜನತೆಯ ಜೀವವನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರಕ್ಕೆ ಮನವಿ :

ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕೋಟ್ಯಾಂತರ ಕುಟುಂಬಗಳಿಗೆ ಮಾಸಿಕ ರೂ.7500/- ಮುಂದಿನ 6 ತಿಂಗಳವರೆಗೆ ನೇರ ನಗದು ವರ್ಗಾವಣೆ ಮಾಡಬೇಕು,ಪ್ರತೀ ಕುಂಟುಂಬಕ್ಕೆ ಮಾಸಿಕ 10 ಕೆ‌.ಜಿಯಷ್ಟು ಆಹಾರಧಾನ್ಯಗಳನ್ನು ನೀಡಬೇಕು,ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು,ಕಾರ್ಮಿಕರಿಗೆ ವೇತನ ಹಾಗೂ ಕೆಲಸದ ಭದ್ರತೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಹೊಂದಿರುವ ಮನವಿಯನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಸಿಪಿಐಎಂ ರಾಜ್ಯ ಮುಖಂಡರಾದ ಜೆ.ಬಾಲಕ್ರಷ್ಣ ಶೆಟ್ಟಿ, ಜಿಲ್ಲಾ ನಾಯಕರಾದ ದಯಾನಂದ ಶೆಟ್ಟಿ, ಸಂತೋಷ್ ಬಜಾಲ್,ಜಯಂತಿ ಶೆಟ್ಟಿ, ವಾಸುದೇವ ಉಚ್ಚಿಲ್,ನಗರ ಮುಖಂಡರಾದ ಸುರೇಶ್ ಬಜಾಲ್, ನವೀನ್ ಕೊಂಚಾಡಿ,ಬಾಬು ದೇವಾಡಿಗ,ಅಶೋಕ್ ಶ್ರೀಯಾನ್,ಭಾರತಿ ಬೋಳಾರ, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್ ಮುಂತಾದವರು ಉಪಸ್ಥಿತರಿದ್ದರು.

Comments are closed.