ಕರಾವಳಿ

ಮಂಗಳೂರಿನಲ್ಲಿ ಜನನಿಬಿಡ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷ : ಭಯಭೀತರಾದ ಸ್ಥಳೀಯರು

Pinterest LinkedIn Tumblr

ಮಂಗಳೂರು, ಮೇ.05 : ಮಂಗಳೂರಿನ ಜನನಿಬಿಡ ಸ್ಥಳಗಳಲ್ಲಿ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಭಯಭೀತರಾದ ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಬಳಿಕ ಸ್ಥಳೀಯರ ಹಾಗೂ ಪೊಲೀಸರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಮುಂಜಾನೆ ನಗರದ ಹೃದಯಭಾಗದ ಮಣ್ಣಗುಡ್ಡೆಯ ವೇರ್ ಹೌಸ್ ಬಳಿ ಪ್ರತ್ಯಕ್ಷವಾದ ಈ ಕಾಡುಕೋಣ ಬಳಿಕ ನಗರದ ಹಲವೆಡೆಗಳಲ್ಲಿ ಸಂಚಾರಿಸಿ ಲೇಡಿಹಿಲ್ ಸಮೀಪದ ಹ್ಯಾಟ್ ಹಿಲ್ ನಲ್ಲಿ ರಾಜರೋಷವಾಗಿ ಸುತ್ತಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು.

ಏಕಾಏಕಿ ನಗರದೊಳಗೆ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಜನದರು ಭಯಭೀತರಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ತಂಡ ಕಾಡುಕೋಣ ಹಿಡಿಯುವ ಕಾಯಾಚರಣೆ ಆರಂಭಿಸಿದರು.

ಹಲವು ಸಮಯಗಳ ಕಾರ್ಯಾಚರಣೆ ಬಳಿಕ ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಕಾಡುಕೋಣವನ್ನು ಸ್ಥಳೀಯರ ಹಾಗೂ ಪೊಲೀಸರ ಸಹಕಾರದೊಂದಿಗೆ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ನಗರದೊಳಗೆ ಕಾಡುಕೋಣ ಸೆರೆ ಹಿಡಿಯುವುದು ಸವಾಲಿನ ಕೆಲಸವೊಂದು ಅರಿತಿದ್ದ ಅರಣ್ಯ ಇಲಾಖೆ ಅರವಳಿಕೆ ತಜ್ಞರ ತಂಡದ ಮಾಹಿತಿ ನೀಡಿದ್ದರು. ಅರವಳಿಕೆ ಚುಚ್ಚುಮದ್ದಿನಿಂದ ಪ್ರಜ್ಞಾ ಹೀನವಾದ ಕಾಡುಕೋಣವನ್ನು ಸೆರೆಹಿಡಿದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ರವಾನಿಸಲಾಯಿತು.

ಒಂಟಿ ಕಾಡುಕೋಣ ಅಪಾಯಕಾರಿಯಾಗಿದ್ದು, ಸುಮಾರು 40 ದಿನಗಳಿಂದ ಲಾಕ್ ಡೌನ್ ಅಗಿರುವ ಕಾರಣ ಜನ , ಸಂಚಾರವಿಲ್ಲದೆ ಕಾಡುಕೋಣ ನಗರದೊಳಗೆ ಪ್ರವೇಶ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಬಜ್ಪೆ, ಅದ್ಯಪಾಡಿ ಅರಣ್ಯ ಪ್ರದೇಶದ ಸುತ್ತಮುತ್ತ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.