ಕರಾವಳಿ

ಕುಂದಾಪುರದ ಗುಡ್ಡಟ್ಟುವಲ್ಲಿ ‘ಆಪರೇಶನ್ ಚೀತಾ’- ಮತ್ತೊಂದು ಗಂಡು ಚಿರತೆ ಸೆರೆ!

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಎಂಬಲ್ಲಿ ಮತ್ತೊಂದು ಗಂಡು ಚಿರತೆ ಬೋನಿಗೆ ಬಿದ್ದಿದ್ದು ಪರಿಸರದಲ್ಲಿ ಚಿರತೆ ಓಡಾಟ ಹೆಚ್ಚಿದ ಬಗ್ಗೆ ಜನರು ಆತಂಕಗೊಂಡಿದ್ದಾರೆ.

ಶಂಕರನಾರಾಯಣ ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ಗುಡ್ಡಟ್ಟು ಭಾಗದಲ್ಲಿ ಕಳೆದ ಆರು ತಿಂಗಳಿನಿಂದ ಈ ಭಾಗದಲ್ಲಿ ಚಿರತೆ ಕಾಟ ಹೆಚ್ಚಿದ್ದು ಜನರ ನಿದ್ರೆಗೆಡಿಸಿದೆ. ಕಳೆದ 10 ದಿನಗಳ ಹಿಂದೆ (ನ.27) ಚಿರತೆಯೊಂದು ಬೋನಿಗೆ ಬಿದ್ದಿದ್ದು ಅರಣ್ಯಾಧಿಕಾರಿಗಳು ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅಭಯಾರಣ್ಯಕ್ಕೆ ರವಾನಿಸಿದ್ದರು. ಮತ್ತೆ ಪುನಃ ಚಿರತೆ ಓಡಾಟವಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತೆ ಪುನಃ ಚಂದ್ರಾವತಿ ಗುಡ್ಡೆಮನೆ ಎನ್ನುವರ ಮನೆ ಬಳಿಯ ಜಾಗದಲ್ಲಿ ಬೋನಿಟ್ಟು ಮತ್ತೆ ಚಿರತೆ ಸೆರೆಗೆ ಮುಂದಾಗಿತ್ತು. ಶನಿವಾರ ಬೆಳಿಗ್ಗೆ ಬೋನಿಗೆ ಚಿರತೆ ಬಿದ್ದಿದ್ದು ಅಂದಾಜು 4-5 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ.

ಮತ್ತೆ ಬೋನ್ ಇಡಲು ಒತ್ತಾಯ..
ಹತ್ತು ದಿನದ ಅಂತರದಲ್ಲಿ ಎರಡು ಗಂಡು ಚಿರತೆಗಳು ಸೆರೆಯಾಗಿರುವುದು ಈ ಭಾಗದ ಜನರಲ್ಲಿ ಆಂತಕ ಹೆಚ್ಚಿಸಿದೆ. ಇನ್ನೂ ಚಿರತೆಯಿರುವ ಸಾಧ್ಯತೆಯಿದ್ದು ಅರಣ್ಯ ಇಲಾಖೆ ಮತ್ತೆ ಇಲ್ಲಿ ಬೋನಿಟ್ಟು ಚಿರತೆ ಸೆರೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆ ತಂಡ: ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜಿ., ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್ ದೇವಾಡಿಗ, ಅರಣ್ಯ ರಕ್ಷಕರಾದ ಸಂತೋಷ್ ಜೋಗಿ, ರವಿ, ಸುದೀಪ್, ರವೀಂದ್ರ, ಅರಣ್ಯ ವೀಕ್ಷಕರಾದ ಲಕ್ಷ್ಮಣ, ಶಿವು ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ- ಕುಂದಾಪುರದ ಗುಡ್ಡಟ್ಟುವಿನ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ!

Comments are closed.