ಕರಾವಳಿ

ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ : ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಆರೋಪ

Pinterest LinkedIn Tumblr

ಮಂಗಳೂರು, ಆಗಸ್ಟ್ 19 : ದೇಶದಲ್ಲಿ ಹಲವು ಗಂಭೀರವಾದ ಆರ್ಥಿಕ ಸಾಮಾಜಿಕ ಸಮಸ್ಯೆಗಳಿವೆ. ದೇಶದ ಸಮಸ್ಯೆ ಜನರಿಂದ ಮರೆಮಾಡಲು ಕಾಶ್ಮೀರದಂತಹ ವಿಚಾರಗಳನ್ನು ಜನರ ಮುಂದೆ ಇಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ಹೇರಲಾಗುತ್ತಿದೆ. ಇದು ಜಮ್ಮು ಕಾಶ್ಮೀರದ ವಿಚಾರದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಹೇಳಿದರು.

ಕನಿಷ್ಠ ಕೂಲಿ, ಪಿಂಚಣಿ, ಸಾಮಾಜಿಕ ಭದ್ರತೆಗಾಗಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಐಕ್ಯತೆ ಮತ್ತು ಸೌಹಾರ್ದತಾ ಪರಂಪರೆಯ ಉಳಿವಿಗಾಗಿ ನಗರದ ಬೋಳಾರದ ಎಸ್. ಕೆ. ಟೈಲ್ ವರ್ಕರ್ಸ್ ಯೂನಿಯನ್ ಕಚೇರಿಯಲ್ಲಿ ನಡೆದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನ 16ನೇ ದ. ಕ. ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿಯ ಬಜೆಟ್ ನಲ್ಲಿ ವಿದೇಶಿ ಗುತ್ತಿಗೆ ಬಂಡವಾಳಶಾಹಿಗಳಿಗೆ ಹೆಚ್ಚಿನ ಆದ್ಯತೆ ಮತ್ತು ದೇಶದ ಗುತ್ತಿಗೆ ಬಂಡವಾಳಶಾಹಿಗಳಿಗೆ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದಾರೆ. ಇಂತಹ ಸರಕಾರ ಕಾರ್ಮಿಕರ ಹಿತಕ್ಕೆ ಆದ್ಯತೆ ನೀಡುವುದಿಲ್ಲ. ದೇಶದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕಾರ್ಮಿಕರಿಂದ ಮಾತ್ರ ಸಾಧ್ಯ. ಆ ಜವಾಬ್ದಾರಿ ನಮಗೆ ಇದೆ ಎಂದರು.

ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ ಮಾತನಾಡಿ, ಸಾರ್ವಜನಿಕ ಉದ್ದಿಮೆ ಮಾರಾಟ ಮಾಡುವುದು ದೇಶ ವಿರೋಧಿ ಕೃತ್ಯ. ನಮ್ಮ ಸರಕಾರ ರೈಲ್ವೆ ಖಾಸಗೀಕರಣ ಮಾಡಿ ಬಂಡವಾಳಗಾರರಿಗೆ ಲೂಟಿಮಾಡಲು ವ್ಯವಸ್ಥೆ ಮಾಡಿ ದೇಶ ವಿರೋಧಿ ಕೃತ್ಯ ಎಸಗಿದೆ.ಸರಕಾರ ಎಜೆಂಟ್ ಗಿರಿಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಸಂವಿಧಾನದ 44 ಕಾನೂನು ನಾಶ ಮಾಡಿ ಆಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಕೆ. ಯಾದವ ಶೆಟ್ಟಿ, ಮಧ್ಯಮ ವರ್ಗದ ಬ್ಯಾಂಕ್ ನೌಕರರ ಸಂಘದ ಬಿ. ಎಂ. ಮಾಧವ, ವಿಮಾ ನೌಕರರ ಸಂಘಟನೆಯ ಬಿ. ಎಂ. ದೇವಾಡಿಗ, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.)ನ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ. ಶೆಟ್ಟಿ, ರೈಲ್ವೆ ಯೂನಿಯನ್ ನ ಲಕ್ಷ್ಮಣನ್ ಸಮ್ಮೇಳನಕ್ಕೆ ಶುಭಕೋರಿ ಮಾತನಾಡಿದರು.

ಹಿರಿಯ ಕಾರ್ಮಿಕ ಮುಖಂಡರಾದ ಕೆ.ಆರ್.ಶ್ರೀಯಾನ್ ರವರು ದ್ವಜಾರೋಹಣಗೈಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಸಿಐಟಿಯುನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. CITUದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಸಿಐಟಿಯುನ ರಾಜ್ಯ ಉಪಾಧ್ಯಕ್ಷರು ಪದ್ಮಾವತಿ ಶೆಟ್ಟಿ, ಹಿರಿಯ ಮುಖಂಡರು ಯು. ಬಿ. ಲೋಕಯ್ಯ, ಕೆ. ಆರ್. ಶ್ರೀಯಾನ್, ಜಿಲ್ಲಾ ಮುಖಂಡರಾದ ಯು ಜಯಂತ ನಾಯ್ಕ್, ಜಯಂತಿ ಬಿ ಶೆಟ್ಟಿ, ರಾಧ ಮುೂಡಬಿದ್ರೆ, ರಾಮಣ್ಣ ವಿಟ್ಲ, ವಸಂತ ನಡ ಉಪಸ್ಥಿತರಿದ್ದರು.

Comments are closed.