ಕರಾವಳಿ

ಮಂಗಳೂರಿನಲ್ಲಿ ಪೊಲೀಸರಿಂದ ಗುಂಡಿನ ದಾಳಿ : ಕುಖ್ಯಾತ ರೌಡಿ ಉಮ್ಮರ್ ಫಾರೂಕ್ ಬಂಧನ

Pinterest LinkedIn Tumblr

ಮಂಗಳೂರು,ಮೇ,29 : ಕುಖ್ಯಾತ ರೌಡಿಯೋರ್ವನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ ಘಟನೆ ಮಂಗಳವಾರ ತಡರಾತ್ರಿ ನಗರದ ಹೊರ ವಲಯದ ಪಚ್ಚನಾಡಿಯಲ್ಲಿ ನಡೆದಿದೆ.

ಬಂಧಿಸಲು ತೆರಳಿದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ನಟೋರಿಯಸ್ ರೌಡಿ ಉಮ್ಮರ್ ಫಾರೂಕ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಉಮ್ಮರ್ ಫಾರೂಕ್ ನನ್ನು ಬಂಧಿಸಲು ಮಂಗಳವಾರ ತಡ ರಾತ್ರಿ ಪೊಲೀಸ್ ತಂಡ ನಗರದ ಹೊರ ವಲಯದ ಪಚ್ಚನಾಡಿಗೆ ತೆರಳಿತ್ತು. ಈ ಸಂದರ್ಭ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಶರಣಾಗುವಂತೆ ಪೊಲೀಸರು ಮನವಿ ಮಾಡಿದರೂ ಆತ ಪ್ರತಿರೋಧ ಒಡ್ಡಿದ್ದಾನೆ. ಅಂತಿಮವಾಗಿ ಆತನ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ.

ಸಮೀರ್ ಎಂಬಾತನ ಕೊಲೆ ಸಂಚು ಪ್ರಕರಣದಲ್ಲಿ ಈತನನ್ನು ಬಂಧಿಸಲು ತೆರಳಿದ ವೇಳೆ ಘಟನೆ ನಡೆದಿದೆ. ಸಮೀರ್ ಟಾರ್ಗೆಟ್ ಗ್ರೂಪ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಉಮರ್ ಫಾರೂಕ್ ಇಲ್ಯಾಸ್ ನ ಬಾವ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸಂದೀಪ್ ಎಂಬವರಿಗೂ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡೇಟು ಬಿದ್ದಿರುವ ರೌಡಿ ಉಮರ್ ಫಾರೂಕ್ ಸ್ಥಿತಿ ಹೇಗಿದೆ ಎಂದು ಪೊಲೀಸರು ಖಚಿತಪಡಿಸಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದ್ದು, ತನಿಖೆಗೆ ನಿರ್ದೇಶನ ಮಾಡಿದ್ದಾರೆ.

Comments are closed.