ಕರಾವಳಿ

ಲೇಡಿಹಿಲ್‌ನಲ್ಲಿ ಯುವಕನಿಗೆ ಚೂರಿ ಇರಿದವರನ್ನು 24 ಗಂಟೆಯಲ್ಲಿ ಬಂಧಿಸಿದ ಉರ್ವಾ ಪೊಲೀಸರು

Pinterest LinkedIn Tumblr

ಮಂಗಳೂರು, ಮೇ 28: ಮಂಗಳೂರಿನ ಲೇಡಿಹಿಲ್ ಸಮೀಪದ ಪೊಂಪ್ಯೆ ಚರ್ಚ್ ಬಳಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನಿಗೆ ಚೂರಿ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸಹಿತ 10 ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಬೋಳೂರು ನಿವಾಸಿಗಳಾದ ಆಶೀಶ್, ತ್ರಿಶೂಲ್, ಸುಶಾಂತ್, ಸಾಗರ್, ಕಿಶನ್, ಅನುಶ್, ಅಂಕಿತ್, ನಿಶಾಂತ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ನಗರದ ಉರ್ವ ಚರ್ಚ್ ಬಳಿ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಮದ್ಯದ ಅಮಲಿನಲ್ಲಿ ರಿತೇಶ್ ಎಂಬ ಯುವಕನಿಗೆ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದರು. ಚೂರಿ ಇರಿತಕ್ಕೊಳಗಾದ ಗಾಯಾಳು ರಿತೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಉರ್ವ ಚರ್ಚ್ ಬಳಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರು ಮದ್ಯದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಯುವಕರ ನಡುವೆ ಜಗಳವಾಗಿದೆ. ಈ ವೇಳೆ ಜಗಳ ದೊಡ್ಡದಾಗುತ್ತಾ ಚೂರಿಯಿಂದ ಇರಿಯುವ ಮಟ್ಟಕ್ಕೆ ತಲುಪಿದೆ. ಸುಮಾರು ೧೦ ಮಂದಿಯಿದ್ದ ದುಷ್ಕರ್ಮಿಗಳ ಗುಂಪೊಂದು ರಿತೇಶ್ ಗೆ ಇರಿದು ಸ್ಥಳದಿಂದ ಪರಾರಿಯಾಗಿತ್ತು.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾದ ಅರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಎಲ್ಲಾ ೧೦ ಆರೋಪಿಗಳನ್ನು ಉರ್ವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜಾರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.