ಕರಾವಳಿ

ಅಂಡರ್‌ವೇರ್‌ನಲ್ಲಿ ತಿರುಗಾಡ್ತಿಯಲ್ಲ ಎಂದಿದ್ದಕ್ಕೆ ಬೈಂದೂರಿನಲ್ಲಿ ಅಣ್ಣನ್ನೇ ಕೊಂದು ತಮ್ಮ ಎಸ್ಕೇಪ್

Pinterest LinkedIn Tumblr

ಕುಂದಾಪುರ: ಹೆಂಗಸರು ಮಕ್ಕಳು ತಿರುಗಾಡುವಲ್ಲಿ ಒಳ ಒಡುಪು ಹಾಕಿ ತಿರುಗಾಡ್ತಿಯಲ್ಲ, ನಿನಗೆ ನಾಚಿಕೆ ಆಗಲ್ಲವಾ ಕೇಳಿದ್ದಕ್ಕೆ ಸ್ವಂತ ಅಣ್ಣನನ್ನೇ ಕೊಂದ ಕಿರಾತಕ ತಮ್ಮ ಎಸ್ಕೇಪ್ ಆಗಿದ್ದಾನೆ. ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಬವಳಾಡಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಬವಳಾಡಿ ಮೇಲ್ಮಕ್ಕಿಚೌಕಿ ನಿವಾಸಿ ನಾಗರಾಜ (47) ಕೊಲೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಆತನ ಸಹೋದರ ಸಂತೋಷ (20) ಕೊಲೆಗೈದು ಪರಾರಿಯಾಗಿದ್ದಾನೆ.

ಆಗಿದ್ದೇನು?
ಬವಳಾಡಿ ಮೇಲ್ಮಕ್ಕಿಚೌಕಿ ನಿವಾಸಿಯಾದ ಕುಪ್ಪ ಕೊರಗ ಎಂಬುವವರ 12 ಮಕ್ಕಳ ಪೈಕಿ ನಾಗರಾಜ ಹಾಗೂ ಸಂತೋಷ ಇಬ್ಬರು ಕೂಲಿ ಕೆಲಸ ಮಾಡಿಜೊತೆಯಾಗಿ ವಾಸವಾಗಿದ್ದು ಇಬ್ಬರು ಗುರುವಾರ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವಾಗ ಕುಡಿದು ಬಂದಿದ್ದರು. ರಾತ್ರಿ ಸುಮಾರಿಗೆ ತಮ್ಮ ಸಂತೋಷ ಕೇವಲ ಒಳ ಉಡುಪಿನಲ್ಲಿ ಮನೆಯ ಸನಿಹದಲ್ಲಿ ತಿರುಗುತ್ತಿದ್ದು, ಇದನ್ನು ಆಕ್ಷೇಪಿಸಿದ ಅಣ್ಣ ನಾಗರಾಜ ಬೈದಿದ್ದ.ಇದಕ್ಕೆ ಕೋಪಗೊಂಡ ಸಂತೋಷ ಮೂಲೆಯಲ್ಲಿದ್ದ ತನ್ನ ತಂದೆಯ ಉರುಗೋಲನ್ನು ತೆಗೆದುಕೊಂಡು ಅಣ್ಣನ ತಲೆಯ ಮೇಲೆ ಬಲವಾಗಿ ಹೊಡೆದನು, ಆಗ ನಾಗರಾಜ ಮೂರ್ಛೆ ಹೋಗಿದ್ದು, ಆಗ ಅಲ್ಲಿದ್ದ ಆತನ ಸಹೋದರಿಯರು ನೀರು ಕುಡಿಸಿ ಆರೈಕೆ ಮಾಡಿದ್ದರೂ ಕೂಡಾ ನಾಗರಾಜ ತೀವ್ರ ರಕ್ತಸ್ರಾವದಿಂದ ತಡರಾತ್ರಿ 2 ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದನು. ಸಹೋದರ ಜಗಳವನ್ನು ತಪ್ಪಿಸಲು ಬಂದ ಭಾವ ಬಾಬುವಿನ ಮೇಲೂ ಆರೋಪಿ ಸಂತೋಷ ಹಲ್ಲೆ ಮಾಡಿದ್ದು, ಅವರನ್ನು ಚಿಕಿತ್ಸೆಗಾಗಿ ಬೈಂದೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದ ನಾಗರಾಜನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಕೊಲೆ ಮುಚ್ಚಿಹಾಕಲು ಯತ್ನ….
ಕೊಲೆಯನ್ನು ಯಾರಿಗೂ ತಿಳಿಯದಂತೆ, ಇದೊಂದು ಸಹಜ ಸಾವು ಎಂಬಂತೆ ಬಿಂಬಿಸಿ ಶುಕ್ರವಾರ ಬೆಳಗ್ಗೆ ಶವ ಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗಿತ್ತು. ಆದರೆ ಈ ಸಂದರ್ಭ ಆರೋಪಿ ಸಂತೋಷ ಪರಾರಿಯಾಗಿರುವುದು ಹಾಗೂ ಅಲ್ಲಲ್ಲಿ ರಕ್ತ ಚೆಲ್ಲಿರುವುದು ಸ್ಥಳೀಯರಿಗೆ ಅನುಮಾನಕ್ಕೀಡು ಮಾಡಿತ್ತು, ಆಗ ಅವರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದರು, ಸ್ಥಳಕ್ಕಾಗಮಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ ಇದೊಂದು ಕೊಲೆ ಪ್ರಕರಣ ಎನ್ನುವುದು ತಿಳಿದಿತ್ತು. ಸದ್ಯ ಆರೋಪಿ ಸಂತೋಷ ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಎಸ್‌ಪಿ ನಿಶಾ ಜೇಮ್ಸ್ ಘಟನಾಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್. ನೇತ್ರತ್ವದಲ್ಲಿ ಆರೋಪಿಯ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.

Comments are closed.