ಕರಾವಳಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ – ಸೀಟು ಹಂಚಿಕೆ ಬಗ್ಗೆ ಹೊಸದಿಲ್ಲಿಯಲ್ಲಿ ಅಂತಿಮ ತೀರ್ಮಾನ : ಎಚ್.ಡಿ. ದೇವೇಗೌಡ

Pinterest LinkedIn Tumblr

ಮಂಗಳೂರು, ಮಾರ್ಚ್. 3: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆಯಲಿದ್ದು, ಹೊಸದಿಲ್ಲಿಯಲ್ಲಿ ಎರಡೂ ಪಕ್ಷದ ರಾಷ್ಟ್ರೀಯ ಮುಖಂಡರು ಚರ್ಚಿಸಿ ಸೀಟು ಹಂಚಿಕೆಯ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡುವುದಿಲ್ಲ. 12 ಸ್ಥಾನ ಬಿಟ್ಟುಕೊಡಲು ಹೇಳಿದ್ದೇವೆ. ಆದರೆ ಅಷ್ಟೇ ಕೊಡಬೇಕು ಎಂದು ಹಟ ಹಿಡಿಯುವುದಿಲ್ಲ ಎಂದು ಹೇಳಿದರು.

ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಅದನ್ನು ಕಾಂಗ್ರೆಸ್ ಮುಖಂಡರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಆದರೆ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದು ಮುಖ್ಯವಲ್ಲ ಮತ್ತು ಆ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಲು‌ ಕಾರ್ಯಕರ್ತರು ಒತ್ತಡ ಹಾಕುತ್ತಿರುವುದು ನಿಜ. ಅಲ್ಲಿನ ಸಂಸದ ವೀರಪ್ಪ ಮೊಯ್ಲಿ ಮೈತ್ರಿ ಬಲಪಡಿಸಲು 28ರ ಪೈಕಿ 10 ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ. ಹಾಗಾಗಿ ಯಾವ ಕ್ಷೇತ್ರವನ್ನು ಕಾಂಗ್ರೆಸ್ ಮುಖಂಡರು ಬಿಟ್ಟುಕೊಡುತ್ತಾರೆ ಅಂತ‌ ಕಾದು ನೋಡಬೇಕು.

ಮಂಡ್ಯದಿಂದ ಸುಮಲತಾ ಟಿಕೆಟ್‌ ಕೇಳಿರುವುದು ಸ್ವಾಭಾವಿಕ. ಆದರೆ ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ‌ ಪ್ರಜ್ವಲ್ ಸ್ಪರ್ಧಿಸಲು ಕಾರ್ಯಕರ್ತರು ಬಲವಾದ ಒತ್ತಡ ಹಾಕುತ್ತಿದ್ದಾರೆ. ಕಾರ್ಯಕರ್ತರ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ದೇವೇಗೌಡ ಅವರು ಹೇಳಿದರು.

ಈ ಸಂದರ್ಭ ಬಿಎಂ ಫಾರೂಕ್ ಅವರ ವೇತನವನ್ನು ಅರ್ಹ ಕುಟುಂಬಗಳಿಗೆ ದೇವೇಗೌಡ ಅವರು ವಿತರಣೆ ಮಾಡಿದರು. ಗ್ರಾಂಡ್ ಮುಫ್ತಿಯಾಗಿ ನಿಯುಕ್ತಿಗೊಂಡ ಎಪಿ ಉಸ್ತಾದ್ ಅವರನ್ನು ದೇವೇಗೌಡ ಸನ್ಮಾನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಮ್‌ಎಲ್‌ಸಿ ಬಿಎಂ ಫಾರೂಕ್, ಜೆಡಿಎಸ್ ಜಿಲಾಧ್ಯಕ್ಷ ಮೊಹಮ್ಮದ್ ಕುಂಜ್ಞಿ, ಜೆಡಿಎಸ್ ಯುವ ಘಟಕದ ಜಿಲಾಧ್ಯಕ್ಷ ಅಕ್ಷಿತ್ ಸುವರ್ಣ, ಮುಖಂಡರಾದ ಎಂ.ಬಿ ಸದಾಶಿವ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.