ಕರಾವಳಿ

ಅಂಕೋಲಾ ಬಳಿ ಭೀಕರ ರಸ್ತೆ ಅಪಘಾತ: ಕಾರು-ಟ್ಯಾಂಕರ್ ಡಿಕ್ಕಿಯಲ್ಲಿ ನಾಲ್ವರು ದುರ್ಮರಣ

Pinterest LinkedIn Tumblr

ಕಾರವಾರ: ಟ್ಯಾಂಕರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆಯರು ಸೇರಿ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಬಳಿ ನಡೆದಿದೆ.

ಬೆಂಗಳೂರಿನ ರಮೇಶ ಕೃಷ್ಣಪ್ಪ (30), ಮೀನಾ ದೊಡ್ಡಬಳ್ಳಾಪುರ (31), ಪ್ರಭಾವತಿ ಚಿಕ್ಕೆಗೌಡ (35), ವಿನಯ ವೆಂಕಟ್ರಮಣಪ್ಪ (39) ಮೃತ ದುರ್ದೈವಿಗಳಾಗಿದ್ದಾರೆ. ಗಾಯಾಳುವನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗೋವಾದಿಂದ ಅಂಕೋಲದ ಮೂಲಕ ಮೂರು ಜನ ಮಹಿಳೆಯರು ಹಾಗೂ ಇಬ್ಬರು ಪುರುಷರು ಓರಿಸ್ಸಾ ನೊಂದಣಿ ಹೊಂದಿದ್ದ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಂಕೋಲದ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.

ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.