ಕರಾವಳಿ

ಜೀಪ್‌ಗೆ ಲಾರಿ ಢಿಕ್ಕಿ : ಭೀಕರ ರಸ್ತೆ ಅಪಘಾತದಲ್ಲಿ ತಲಪಾಡಿಯ ಐವರು ಮೃತ್ಯು – ಎಂಟು ಮಂದಿಗೆ ಗಾಯ

Pinterest LinkedIn Tumblr

ಮಂಗಳೂರು, ಜುಲೈ.9: ಲಾರಿ ಮತ್ತು ತೂಫಾನ್ ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರ ಸಹಿತ ಐವರು ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಸಮೀಪದ ನಯಬಝಾರ್‌ನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಕೆ.ಸಿ. ರೋಡ್ ಸಮೀಪದ ಅಜ್ಜಿನಡ್ಕ ಸಾಮನಿಗೆ ನಿವಾಸಿಗಳಾದ ಬೀಫಾತಿಮಾ (65), ಅಸ್ಮಾ (30), ನಸೀಮಾ(38), ಮುಸ್ತಾಕ್(41) ಹಾಗೂ ಇಮ್ತಿಯಾಝ್(35) ಎಂದು ಗುರುತಿಸಲಾಗಿದೆ. ಮೃತಪಟ್ಟ ಎಲ್ಲರು ತಲಪಾಡಿ ಸಮೀಪದ ಕೆ.ಸಿ.ರೋಡ್ ನಿವಾಸಿಗಳೆಂದು ತಿಳಿದು ಬಂದಿದೆ.ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿ. ಶವಾಗಾರದಲ್ಲಿರಿಸಲಾಗಿದೆ.

ಜೀಪಿನಲ್ಲಿದ್ದ ಉಳಿದ 8 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಜೀಪಿಗೆ ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿ ನಯಬಝಾರ್‌ನಲ್ಲಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಜೀಪಿನಲ್ಲಿದ್ದವರು ಪಾಲಕ್ಕಾಡಿನಲ್ಲಿ ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಅಪಫಾತ ಸಂಭವಿಸಿದೆ. ಲಾರಿ ಟಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Comments are closed.