ಕ್ರೀಡೆ

‘ಒಲಂಪಿಕ್ಸ್’ನಲ್ಲಿ ಸಾಧನೆ ಮೆರೆದು ತಾಯ್ನಾಡಿಗೆ ಮರಳಿದ ಕ್ರೀಡಾಪಟುಗಳಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ

Pinterest LinkedIn Tumblr

ನವದೆಹಲಿ: ಟೋಕಿಯೋ ಒಲಂಪಿಕ್ಸ್ ನಲ್ಲಿ ಅದ್ವಿತೀಯ ಸಾಧನೆ ಮೆರೆದು ತಾಯ್ನಾಡಿಗೆ ಮರಳಿದ ಕ್ರೀಡಾಪಟುಗಳಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಚಿನ್ನದ ಪದಕ ವಿಜೇತ ನೀರಜ್, ಕಂಚಿನ ತಾರೆ ಲವ್ಲಿನಾ, ಕಂಚಿನ ವೀರ ಭಜರಂಗ್ ಪುನಿಯಾ, ಪುರುಷ ಮತ್ತು ಮಹಿಳಾ ಹಾಕಿ ತಂಡದ ಸದಸ್ಯರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಆತ್ಮೀಯ ಸ್ವಾಗತ ನೀಡಿದ್ರು.

ಏರ್‍ಪೋರ್ಟ್ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದನ್ನು ಕಂಡು ಬೇರೊಂದು ಮಾರ್ಗದಲ್ಲಿ ಕ್ರೀಡಾಪಟುಗಳನ್ನು ಹೊರಗೆ ಕರೆತಂದರೂ, ಅಭಿಮಾನಿಗಳು ಬಿಡಲಿಲ್ಲ. ಚಿನ್ನದ ಭರ್ಜಿ ಭೀಮನನ್ನು ಅಭಿಮಾನಿಗಳು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ರು. ಏರ್ ಪೋರ್ಟ್ ನಿಂದ ಹೋಟೆಲ್ ಅಶೋಕವರೆಗೆ ತೆರೆದ ವಾಹನಗಳಲ್ಲಿ ಒಲಂಪಿಕ್ಸ್ ವೀರರ ಮೆರವಣಿಗೆ ನಡೀತು. ನಂತರ ಒಲಂಪಿಕ್ಸ್ ವೀರರನ್ನು ಕೇಂದ್ರ ಸರ್ಕಾರ ಸನ್ಮಾನಿಸಿತು.

ವೇದಿಕೆ ಮೇಲೆ ಬಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಎಲ್ಲರಿಗೂ ಮೆಡಲ್ ತೋರಿಸಿ ಮಾತನಾಡಿದರು. ಇದು ದೇಶದ ಪದಕ ನನ್ನದಲ್ಲ. ಈ ಪದಕ ಬಂದಾಗಿನಿಂದ ಸರಿಯಾಗಿ ನಿದ್ದೆ, ಊಟ ಸಹ ಮಾಡಿಲ್ಲ. ಅಂದಿನಿಂದ ಇಂದಿನವರೆಗೂ ಜೇಬಿನಲ್ಲಿಯೇ ಪದಕ ಇಟ್ಟುಕೊಂಡು ಓಡಾಡುತ್ತಿದ್ದೇನೆ. ಜೇಬಿನಿಂದ ಪದೇ ಪದೇ ಪದಕ ತೆಗೆದು ನೋಡಿ ಸಂಭ್ರಮಿಸುತ್ತಿದ್ದೇನೆ. ಇಂದು ಪದಕ ಬಂದಿದ್ದರ ಬಗ್ಗೆ ಹಲವು ವಿಷಯಗಳನ್ನು ಹೇಳಬಹುದು. ಆದ್ರೆ ಈಗ ಆ ವಿಷಯಗಳು ಬೇಡ. ನನ್ನನ್ನು ಬೆಂಬಲಿಸಿ ಗೌರವಿಸುತ್ತಿರುವ ಎಲ್ಲರಿಗೂ ಧನ್ಯವಾದ. ಓಲಿಂಪಿಕ್ಸ್ ನನ್ನ ಜೀವನದ ಬಹುದೊಡ್ಡ ಕನಸು ಅಗಿತ್ತು. ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ನನಗಿಷ್ಟವಿರಲಿಲ್ಲ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಭಜರಂಗ್ ಪುನಿಯಾ, ಕಂಚಿನ ಪದಕಕ್ಕಾಗಿ ಆಡುವಾಗ ನಾನು ನೀ ಕ್ಯಾಪ್ ಸಹ ಧರಿಸಿರಲಿಲ್ಲ. ಗಾಯವಾದ್ರೂ ಪರವಾಗಿಲ್ಲ, ಮರುದಿನ ವಿಶ್ರಾಂತಿ ಪಡೆದುಕೊಳ್ಳಬಹುದು ಅಂತ ಅಖಾಡ ಪ್ರವೇಶಿಸಿದೆ ಅಂತ ಎಂದರು. ಲವ್ಲಿನಾ ಮಾತನಾಡಿ, ನಾನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ತರಲು ಪ್ರಯತ್ನಿಸುತ್ತೇನೆ ಎಂದು ದೇಶದ ಜನತೆಗೆ ಭರವಸೆ ನೀಡಿದರು.

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂಡ ಕ್ರೀಡಾಳುಗಳ ಹೆಸರಿನಲ್ಲಿ ಈ ಸಂಜೆ ಇತಿಹಾಸದಲ್ಲಿ ದಾಖಲಾಗಲಿದೆ. ಎಲ್ಲ ವಿಜೇತರಿರೂ 135 ಕೋಟಿ ಭಾರತೀಯರ ಪರವಾಗಿ ಶುಭ ಕೋರುತ್ತೇನೆ. ನೀರಜ್ ಚೋಪ್ರಾ ಕೇವಲ ಪದಕ ಮಾತ್ರ ಗೆದ್ದಿಲ್ಲ, ಬದಲಾಗಿ ಇಡೀ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಎಲ್ಲ ಅಥ್ಲೀಟ್ ಗಳು ಹೊಸ ಭಾರತದ ಹೊಸ ಹೀರೋಗಳು. ಮುಂದಿನ ಒಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಳುಗಳು ಚೆನ್ನಾಗಿ ಪ್ರದರ್ಶನ ನೀಡಲಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು.

Comments are closed.