ಐಪಿಎಲ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಸೋಲಲು ಯುವ ಕ್ರಿಕೆಟಿಗರತ್ತ ಬೊಟ್ಟು ಮಾಡಿರುವ ನಾಯಕ ಧೋನಿ, ಹೇಳಿಕೆ ಈಗ ಕ್ರಿಕೆಟಿಗರಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟು ಹಾಕಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ರಲ್ಲಿ ಗೆಲುವು ದಾಖಲಿಸಿರುವ ಧೋನಿ ಪಡೆ ಈ ಬಾರಿ ಪ್ಲೇ ಆಫ್ ಪ್ರವೇಶಿಸುವುದು ಕಷ್ಟಸಾಧ್ಯ. ಇದರ ನಡುವೆ ಐಪಿಎಲ್ನ 37ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ ಬಳಿಕ ಮಾತನಾಡಿದ ಮಾಹೀ, ಸಿಎಸ್ಕೆ ತಂಡದಲ್ಲಿರುವ ಕೆಲ ಯುವ ಕ್ರಿಕೆಟಿಗರಲ್ಲಿ ನಾವು ತುಡಿತ ಕಂಡಿರಲಿಲ್ಲ. ಅವರಲ್ಲಿ ಆಟದ ಬಗ್ಗೆ ಯಾವುದೇ ಕಿಚ್ಚು ಇರಲಿಲ್ಲ. ಹೀಗಾಗಿ ಅನುಭವಿ ಆಟಗಾರರ ನಡುವೆ ಸ್ಥಾನಗಿಟ್ಟಿಸಿಕೊಂಡಿಲ್ಲ ಎಂದು ತಿಳಿಸಿದರು.
ಅಲ್ಲದೆ ಈ ಬಾರಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬುದು ಸತ್ಯ. ಇದೇ ಕಾರಣದಿಂದ ಏಕಾಏಕಿ ತಂಡದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಮಗೆ ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡು ಬಂದಿರಲಿಲ್ಲ. ಆದರೆ, ಮುಂದೆ ಬರುವ ಪಂದ್ಯಗಳಲ್ಲಿ ಕಿರಿಯರಿಗೆ ಅವಕಾಶ ನೀಡಲಾಗುವುದು. ಇನ್ನು ಮುಂದಿನ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಸ್ಥಾನ ನೀಡಿದರೂ, ಅವರು ಯಾವುದೇ ಒತ್ತಡವಿಲ್ಲದೆ ಆಡುತ್ತಾರೆ ಎಂದು ಧೋನಿ ತಿಳಿಸಿದರು.
ಧೋನಿಯ ಈ ಹೇಳಿಕೆ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಸತತ ಸೋಲಿನ ಬಳಿಕ ತಂಡದ ನಾಯಕ ನೀಡಿರುವ ಸಮಾಜಾಯಿಷಿ ಬಗ್ಗೆ ಅನೇಕರು ಕಿಡಿಕಾರಿದ್ದಾರೆ. ಸಿಎಸ್ಕೆ ತಂಡದ ಮುಂದಿನ ಪಂದ್ಯವು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದ್ದು, ಅದರ ನಂತರ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ.
Comments are closed.