ಕ್ರೀಡೆ

ಧೋನಿಯ ಕ್ರಿಕೆಟ್ ಬದುಕು ಅಂತ್ಯವಾಯಿತಾ…? ಎದ್ದಿವೆ ಹಲವು ಪ್ರಶ್ನೆಗಳು…!

Pinterest LinkedIn Tumblr

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಟ್ಟಿದ್ದು, ಕ್ಯಾಪ್ಟನ್ ಕೂಲ್ ಕ್ರಿಕೆಟ್ ಬದುಕು ಅಂತ್ಯವಾಯಿತಾ? ತಂಡದಿಂದ ಅವರು ಶಾಶ್ವತವಾಗಿ ದೂರವಾಗಿದ್ದಾರೆಯೇ? ಸದ್ಯ ರಜೆಯಲ್ಲಿರುವ ಧೋನಿ ಮತ್ತೆ ತಂಡಕ್ಕೆ ಮರಳುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಬಿಸಿಸಿಐ ಇಂದು ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020ರ ವರೆಗಿನ ಟೀಂ ಇಂಡಿಯಾ ಪುರುಷ ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಡಲಾಗಿದೆ.

ಕಳೆದ ಸಾಲಿನ ಗುತ್ತಿಗೆ ಪಟ್ಟಿಯಲ್ಲಿ ಧೋನಿ ‘ಎ’ ಗುತ್ತಿಗೆ ಹೊಂದಿದ್ದರು. ಆದರೆ ಕಳೆದ ಜುಲೈನಲ್ಲಿ ನಡೆದ ವಿಶ್ವಕಪ್ ಸೆಮಿ ಫೈನಲ್ ನಂತರ ಬಿಸಿಸಿಐ ನಿಂದ ರಜೆ ಪಡೆದಿದ್ದ ಮಾಹಿ ನಂತರ ಯಾವುದೇ ಕ್ರಿಕೆಟ್ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ.

ನವದೀಪ್ ಸೈನಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಾಹರ್ ಅವರಿಗೆ ಮೊದಲ ಬಾರಿಗೆ ಬಿಸಿಸಿಐ ವಾರ್ಷಿಕ ಗುತ್ತಿಗೆ ನೀಡಲಾಗಿದೆ.

ಕನ್ನಡಿಗ ಕೆ ಎಲ್ ರಾಹುಲ್ ‘ಎ’ ಗುತ್ತಿಗೆ ಪಡೆದಿದ್ದರೆ, ಟೆಸ್ಟ್ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ‘ಬಿ’ ಗುತ್ತಿಗೆ ಪಡೆದಿದ್ದಾರೆ.

ವಾರ್ಷಿಕ ಗುತ್ತಿಗೆ
ಎ+ (7 ಕೋಟಿ): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ
ಎ (5 ಕೋಟಿ): ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಭ್ ಪಂತ್.

ಬಿ (3 ಕೋಟಿ): ವೃದ್ಧಿಮಾನ್ ಸಾಹ, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್.

ಸಿ (1 ಕೋಟಿ): ಕೇದಾರ್ ಜಾಧವ್, ನವದೀಪ್ ಸೈನಿ, ದೀಪಕ್ ಚಾಹರ್, ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್.

Comments are closed.