ಅಬುಧಾಬಿ: ಟಿ20 ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯದಲ್ಲಿ ಆಟಗಾರನೊಬ್ಬ ಮೂತ್ರ ವಿಸರ್ಜನೆ ಮಾಡಲು ಬ್ಯಾಟನ್ನು ಬಿಟ್ಟು ಮೈದಾನದಿಂದಲೇ ಓಡಿದ ಪ್ರಸಂಗ ನಡೆದಿದೆ.
ಅಬುಧಾಬಿಯ ಶೇಖ್ ಝಾಯದ್ ಕ್ರೀಡಾಂಗಣದಲ್ಲಿ ಕೆನಡಾ ಮತ್ತು ನೈಜೀರಿಯಾ ನಡುವೆ ಟಿ20 ಕ್ರಿಕೆಟ್ ಪಂದ್ಯ ನಡೆಯುತಿತ್ತು. ಕೆನಡಾ ನೀಡಿದ 160 ರನ್ ಗಳ ಗುರಿಯನ್ನು ಬೆನ್ನತ್ತಿದ ನೈಜೀರಿಯಾ 7 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್ ನಲ್ಲಿದ್ದ ಸುಲೇಮಾನ್ ರನ್ಸೀವಿ ಇದ್ದಕ್ಕಿದ್ದಂತೆ ಬ್ಯಾಟನ್ನು ಬಿಟ್ಟು ಓಡಿಕೊಂಡು ಮೈದಾನವನ್ನು ತೊರೆದಿದ್ದಾರೆ.
ಇದ್ದಕ್ಕಿದ್ದಂತೆ ಯಾರಿಗೂ ಹೇಳದೇ ರನ್ಸೀವಿ ಓಡಿದ್ದನ್ನು ನೋಡಿ ಅಂಪೈರ್ ಮತ್ತು ಆಟಗಾರರು ಆ ಕ್ಷಣ ದಂಗಾಗಿ ಬಿಟ್ಟಿದ್ದಾರೆ. ಓಡಿದ್ದು ಯಾಕೆ ಎನ್ನುವುದು ತಿಳಿಯದ ಪರಿಣಾಮ ಕೊನೆಗೆ ಆಟ ಮುಂದುವರಿಸಲು ಮೊತ್ತೊಬ್ಬ ಆಟಗಾರ ಮೈದಾನಕ್ಕೆ ಇಳಿಯಲು ಮುಂದಾಗುತ್ತಾನೆ. ಈ ಸಮಯದಲ್ಲಿ ರನ್ಸೀವಿ ಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡು ತೊಡೆಯ ಗಾರ್ಡ್ ಗಳನ್ನು ಸರಿ ಮಾಡಿಕೊಂಡು ಓಡಿಕೊಂಡು ಮೈದಾನವನ್ನು ಪ್ರವೇಶಿಸುತ್ತಾರೆ.
ರನ್ಸೀವಿ ಓಡಿಕೊಂಡು ಮೈದಾನವನ್ನು ಪ್ರವೇಶಿಸುವುದನ್ನು ನೋಡಿ ಇತರೇ ನೈಜೀರಿಯಾ ಆಟಗಾರರು ಬಿದ್ದು ಬಿದ್ದು ನಕ್ಕಿದ್ದಾರೆ. ವಿಷಯ ತಿಳಿದು ಅಂಪೈರ್ ಸಹ ನಗೆ ಬೀರಿದ್ದಾರೆ. ಈ ಅರ್ಹತಾ ಪಂದ್ಯವನ್ನು ಕೆನಡಾ 50 ರನ್ ಗಳಿಂದ ಗೆದ್ದುಕೊಂಡಿದೆ.
Comments are closed.