ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗುವ ಮಾತು, ಅದಕ್ಕೆ ಸಂಬಂಧಿಸಿದ ಊಹಾಪೋಹಗಳು ಇಂದು ನಿನ್ನೆಯದಲ್ಲ. ಹಾಗಾಗಿ ಅಂಥ ವಿಚಾರ ಚರ್ಚೆಗೆ ಬಂದರೆ ಅದೇನು ಹೊಸದೂ ಎನಿಸುವುದಿಲ್ಲ. ಆದರೆ, ಈ ಬಾರಿ ನಿವೃತ್ತಿಗೆ ಪೂರಕವಾದ ಸಂಗತಿಯೊಂದು ನಡೆದಿದೆ. ಆ ಪ್ರಸಂಗ ಧೋನಿ ನಿವೃತ್ತಿಯ ಮುನ್ಸೂಚನೆಯೇ ಎಂಬ ಚರ್ಚೆಗಳು ಕ್ರಿಕೆಟ್ ರಂಗದಲ್ಲಿ ನಡೆಯುತ್ತಿದೆ.
ನಿನ್ನೆ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತದ ಎದುರು ಇಂಗ್ಲೆಂಡ್ ಎಂಟು ವಿಕೆಟ್ಗಳ ಭಾರಿ ಜಯ ಸಾಧಿಸುವ ಮೂಲಕ 2-1ರ ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. ಭಾರತ ಸರಣಿ ಕೈ ಚೆಲ್ಲಿತ್ತು. ಪಂದ್ಯ ಮುಗಿದ ಬಳಿಗೆ ಧೋನಿ ಅಂಪೈರ್ ಬಳಿಗೆ ಹೋಗಿ ಪಂದ್ಯಕ್ಕೆ ಬಳಸಿದ ಚೆಂಡನ್ನು ಕೇಳಿ ಪಡೆದರು.
ಪಂದ್ಯ ಮುಗಿದ ಬಳಿಕ ಆಟಗಾರರೆಲ್ಲರೂ ಡ್ರೆಸ್ಸಿಂಗ್ ರೂಂಗೆ ಮರಳುವಾಗ ಹಿಂದೆ ಅಂಪೈರ್ಗಳ ಜತೆ ಹೆಜ್ಜೆ ಹಾಕುತ್ತಾ ಬರುವ ಧೋನಿ ಅವರಿಂದ ಚೆಂಡನ್ನು ಕೇಳಿ ಪಡೆದುಕೊಳ್ಳುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧೋನಿ ಅವರ ಈ ನಡೆ ಸದ್ಯ ಕ್ರಿಕೆಟ್ ರಂಗದಲ್ಲಿ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ. ನಿವೃತ್ತರಾಗುವ ಕಾರಣಕ್ಕೇ ಅವರು ಅಂತಿಮ ಪಂದ್ಯದ ಚೆಂಡ್ ಅನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅಂತಿಮ ಎರಡು ಪಂದ್ಯಗಳಲ್ಲಿ ಧೋನಿ ಅವರು ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳ, ವಿಶ್ಲೇಷಕರ ಕಟು ಮಾತಿಗೂ ಗುರಿಯಾಗಿದ್ದಾರೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಅವರು ನಿವೃತ್ತಿಯತ್ತ ಚಿಂತನೆ ನಡೆಸುತ್ತಿದ್ದಾರೆ ಎಂಬ ಅನುಮಾನಗಳು ಮನೆ ಮಾಡಿವೆ.
Comments are closed.