ಕರ್ನಾಟಕ

ಅನಂತ ಹೆಗಡೆಗೆ ದೇವನೂರ ಬಹಿರಂಗ ಪತ್ರ

Pinterest LinkedIn Tumblr


ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆಯವರೇ,

ಯಲಬುರ್ಗ ತಾಲೂಕು ಕುಕನೂರಿನಲ್ಲಿ ತಾವು ಆಡಿದ ಮಾತುಗಳನ್ನು ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ. ಅಪ್ಪ, ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ತಾವು ಲೇವಡಿ ಮಾಡಿದ್ದೀರ! ಈಗ ತಮಗೆ ಅಪ್ಪ, ಅಮ್ಮನ ಗುರುತು ತಿಳಿಸಿಕೊಡಬೇಕಾಗಿದೆ- ದ್ವೇಷವೇ ನಿಮ್ಮ ತಂದೆ; ಅಸಹನೆಯೇ ನಿಮ್ಮ ತಾಯಿ; ಭ್ರಮೆಯೇ ನಿಮ್ಮ ಮೂಲ ಪುರುಷ; ಮಿಥ್ಯಾ ಎಂಬುದೇ ನಿಮ್ಮ
ಜಾnನ ಸಂಪತ್ತು. ಇಷ್ಟು ಸಾಕೆನ್ನಿಸುತ್ತದೆ.

ಈಗಲೂ ಆಗಾಗ ನೆನಪಾಗುತ್ತ ನನಗೆ ನೋವನ್ನುಂಟು ಮಾಡುವ ಸಂಗತಿ ಎಂದರೆ- ಬಿಜೆಪಿಯ ದೊಡ್ಡ ನಾಯಕ
ವಾಜಪೇಯಿ ಅವರು ಪ್ರಜಾnಹೀನ ಸ್ಥಿತಿಯಲ್ಲಿದ್ದಾರೆ, ಹಾಗೇ ಎನ್‌ಡಿಎಗೆ ಸೇರಿದ ಸಮಾಜವಾದಿ ಹಿನ್ನೆಲೆಯ ಜಾರ್ಜ್‌
ಫ‌ರ್ನಾಂಡೀಸ್‌ ಕೂಡ ಪ್ರಜಾnಹೀನ ಸ್ಥಿತಿಯಲ್ಲಿದ್ದಾರೆ.

ಇಂಥವರು ಈಗ ತಮ್ಮ ಪಕ್ಷದಲ್ಲಿ ಸಕ್ರಿಯವಾಗಿ ಇಲ್ಲದ ಕಾರಣವಾಗಿ ಹಾಲಿ ಬಿಜೆಪಿ ಹಾಗೂ ಎನ್‌ಡಿಎಗಳು ಪ್ರಜಾnಹೀನ ಪುಂಡುಪೋಕರಿ ಮಾತುಗಳನ್ನು ಉದುರಿಸುತ್ತಿದ್ದಾರೇನೋ ಎನ್ನಿಸಿಬಿಡುತ್ತದೆ. ಆಮೇಲೆ ತಮ್ಮ ಇನ್ನೊಂದು ಮಾತು-ಹುಟ್ಟಿದಾಗ ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೇ. ಆದರೆ ಅವನು ಮಾಡುವ ಕೆಲಸ ಕಾರ್ಯಗಳಿಂದ ಮನುಷ್ಯನಾಗಿ ಬದಲಾಗುತ್ತಾನೆ ಎನ್ನುತ್ತೀರಿ. ತಮ್ಮ ಕೇಸಲ್ಲಿ ಇದು ಯಾಕೋ ಉಲ್ಟಾ ಅನಿಸುತ್ತದೆ. ತಮ್ಮ ಗದ್ದಲದ ನಡುವೆಯೂ ಸ್ವಲ್ಪಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಗಮನಿಸಿ ಎಂದು ವಿನಂತಿಸುವೆ.

ಮುಂದೆ ತಾವು ರಣರಂಗದಲ್ಲಿ ಠೇಂಕರಿಸುವಂತೆ- ಸಂವಿಧಾನ ಬದಲಾಯಿಸುತ್ತೇವೆ… ಅದಕ್ಕೇ ನಾವು ಬಂದಿರುವುದು ಎನ್ನುತ್ತೀರಿ. ತಮ್ಮಂಥವರ ಕೈಗೇನಾದರೂ ಸಂವಿಧಾನದ ರಚನಾ ಕಾರ್ಯ ಆಗ ಸಿಕ್ಕಿಬಿಟ್ಟಿದ್ದರೆ ಭ್ರಮಾಧೀರನಾದ ತಮ್ಮ ಪೂರ್ವಿಕರು ನರಕ ಸೃಷ್ಟಿಸಿ ಅದನ್ನೇ ಸ್ವರ್ಗ ಅಂದು ಬಿಡುತ್ತಿದ್ದ ರೇನೋ. ಸಂವಿಧಾನ ರಚನಾ ಕಾರ್ಯ ಡಾ.ಅಂಬೇಡ್ಕರ್‌ ಅವರ ಕೈಗೆ ಸಿಕ್ಕಿ ಭಾರತಮಾತೆ ಬಚಾವಾದಳು. ಸಂವಿಧಾನದ ಪ್ರಿಯಾಂಬಲ್‌ ಕಡೆಗೆ ಸಂವಿಧಾನದ ತಿದ್ದುಪಡಿಗಳು ಚಲಿಸುತ್ತ ನಡೆಯಬೇಕಾಗಿದೆ. ನಮ್ಮ ಸಂಸತ್‌ ಸದಸ್ಯರಾದ ತಾವು ಇದನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು.

ಕೊನೆಯದಾಗಿ ತಮಗೊಂದು ಕಿವಿಮಾತು: ಕುವೆಂಪು ಅವರ ವೈಚಾರಿಕತೆಗೆ ತತ್ತರಿಸಿದ ಧರ್ಮಾಂಧರು ತುಂಬಾ ನೀಚವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಕುವೆಂಪು ಅಂಥದ್ದನ್ನೆಲ್ಲ ನಿರ್ಲಕ್ಷಿಸಿ ಹೇಳುತ್ತಾರೆ. ಕುಸ್ತಿ ಅಖಾಡಕ್ಕೆ ಬರುವವರು ಕನಿಷ್ಠ ಲಂಗೋಟಿ ಹಾಕಿ ಬರಬೇಕು… ಲಂಗೋಟಿ ಹಾಕದೆ ಅಖಾಡಕ್ಕೆ ಬರುವವರ ಜೊತೆ ನಾನು ಕುಸ್ತಿ ಆಡಲಾರೆ ಎಂದು. ಕುವೆಂಪು ಅವರ ಈ ಮಾತನ್ನು ತಾವು ಮನನ ಮಾಡಿಕೊಳ್ಳಿ ಎಂದು ವಿನಂತಿಸುವೆ. ಬೀದಿಯನ್ನೇ ಅಖಾಡ ಮಾಡಿಕೊಳ್ಳುವ ತಮ್ಮ ಮತ್ತು ತಮ್ಮಂಥವರ ಮಾನಮರ್ಯಾದೆ ಆಗ ಸ್ವಲ್ಪವಾದರೂ ಉಳಿಯಲೂಬಹುದು.

ಕೊಳಕನ್ನು ಹೀರಿಕೊಂಡು ಸಸ್ಯಗಳು ಫ‌ಲಪುಷ್ಪ ಕೊಡುವಂತೆ ಹೆಗಡೆಯವರ ವಾಕ್‌ ಕೊಳಕನ್ನು ರೂಪಾಂತರಿಸಿಕೊಂಡು ಸೆಕ್ಯುಲರಿಸಂಗೆ ಒಂದು ಪದ ಹುಟ್ಟಿತು. ಅದು ಸಹನಾಧರ್ಮ(Religion of Tolerance) ಈ ಸಹನಾಧರ್ಮ ಆಯಾಯ ಧರ್ಮ ದೊಳಗೂ ಇರಬೇಕು, ಹಾಗೇ ಧರ್ಮ ಧರ್ಮಗಳ ನಡುವೆಯೂ ಇರಬೇಕು. ಈ ನುಡಿ ಹುಟ್ಟಿಗೆ ಕಾರಣರಾದ ಅನಂತಕುಮಾರ್‌ ಹೆಗಡೆಯ ವರಿಗೆ ಕೃತಜ್ಞತೆಗಳು.
– ದೇವನೂರ ಮಹಾದೇವ, ಹಿರಿಯ ಸಾಹಿತಿ

-ಉದಯವಾಣಿ

Comments are closed.