ಮುಂಬೈ: ಸತತ 3 ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮುಂಬೈನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿಯಾದ ಮಳೆಯಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಮುಂಬೈನ ಬಹುತೇಕ ಏರಿಯಾಗಳು ಮುಳುಗಡೆಯಾಗಿದೆ. ಇಲ್ಲಿನ ಚುನಾಬತ್ತಿ, ವಡಾಲಾ, ದಡಾರ್, ಮಲಾದ್, ಕುರ್ಲ ಮುಂತಾದ ರಸ್ತೆಗಳು ಪ್ರವಾಹದಿಂದ ಮುಳುಗಿಹೋಗಿವೆ. ಒಂದು ಅಂದಾಜಿನ ಪ್ರಕಾರ ಕಳೆದ ಒಂದು ದಿನದಲಲ್ಲಿ ಮುಂಬೈನಲ್ಲಿ 231 ಮಿ.ಮೀ. ಮಳೆಯಾಗಿದೆ. ಈ ವರ್ಷ ಮುಂಬೈನಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ.
ಮಳೆಯಿಂದಾಗಿ ಇದುವರೆಗೂ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಅನೇಕ ಮರಗಳು ಧರೆಗುರುಳಿವೆ. ದಕ್ಷಿಣ ಮುಂಬೈ ಭಾಗದಲ್ಲಿ ಬೃಹತ್ ಕಟ್ಟಡದ ಕಾಂಪೌಂಡ್ನ ಅರ್ಧ ಭಾಗ ಕುಸಿದಿರುವ ಕಾರಣ ಪಾರ್ಕ್ ಮಾಡಿದ್ದ 12 ಕಾರುಗಳು ಡ್ಯಾಮೇಜ್ ಆಗಿವೆ ಎಂದು ಐಎಎನ್ಎಸ್ ತಿಳಿಸಿದೆ.
ಮಳೆಯಿಂದ ರಸ್ತೆಯಲ್ಲೆಲ್ಲ ನೀರು ತುಂಬಿದ್ದು, ಸೋಮವಾರ ಆಫೀಸಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದರಿಂದ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಎಲ್ಲೆಡೆ ಟ್ರಾಫಿಕ್ ಜಾಮ್ನಿಂದ ಜನ ಪರದಾಡುವಂತಾಯಿತು.
ಗುಜರಾತ್ ಕಡೆಗೆ ಮಳೆಯಾಗುವ ಸಾಧ್ಯತೆ:
ನಿಲ್ಲದೆ ಸುರಿಯುತ್ತಿರುವ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಂಡಿಯ ಮೆಟೆರಾಲಾಜಿಕಲ್ ಡಿಪಾರ್ಟಮೆಂಟ್ ತಿಳಿಸಿದೆ. ಮುಂಬೈನ ನಗರಗಳಲ್ಲಿ ಮಾತ್ರವಲ್ಲದೆ ಕೊಂಕಣ ಮತ್ತು ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಭಾಗ, ಕೇರಳ, ಗೋವಾದಲ್ಲಿಯೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯೂ ತಿಳಿಸಿದೆ.
ವಿಮಾನ, ರೈಲು ಸಂಚಾರ ವಿಳಂಬ:
ಏರ್ಪೋರ್ಟ್ನ ರನ್ವೇ ನೀರಿನಲ್ಲಿ ಮುಳುಗಿದ ಕಾರಣ ನಿನ್ನೆ ಮುಂಬೈ ಏರ್ಪೋರ್ಟ್ನಲ್ಲಿ ಇಳಿಯಬೇಕಾಗಿದ್ದ ವಿಮಾನ 30 ನಿಮಿಷ ತಡವಾಗಿ ಲ್ಯಾಂಡ್ ಆಯಿತು. ಮಳೆಯಿಂದಾಗಿ 35ಕ್ಕೂ ಅಧಿಕ ವಿಮಾನಗಳು ತಡವಾಗಿ ಲ್ಯಾಂಡ್ ಆದವು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಮುಚ್ಚಿರುವ ಕಾರಣ ಬಹುತೇಕ ಜನರು ಸಂಚರಿಸಲು ಸ್ಥಳೀಯ ರೈಲನ್ನೇ ಅವಲಂಬಿಸಿದ್ದಾರೆ. ಆದರೆ, ಹಳಿಗಳ ಮೇಲೂ ನೀರು ಬರುವ ಸಾಧ್ಯತೆ ಇರುವುದರಿಂದ ರೈಲ್ವೆ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
Comments are closed.