ಕರ್ನಾಟಕ

ನಾನು ಎಂದಿಗೂ ರೈತರ ಪರವಾಗಿಯೇ ಇರುತ್ತೇನೆ, ನನ್ನಿಂದ ರೈತ ಸಮುದಾಯಕ್ಕೆ ಎಂದೂ ಅನ್ಯಾಯವಾಗುವುದಿಲ್ಲ: ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಪ್ರಧಾನಿ ಮೋದಿ ಒಳ್ಳೆಯ ಉದ್ದೇಶದಿಂದ ಕೃಷಿ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ನಾನು ರೈತನ ಪುತ್ರನಾಗಿದ್ದು, ಎಂದಿಗೂ ರೈತರ ಪರವಾಗಿಯೇ ಇರುತ್ತೇನೆ. ನನ್ನಿಂದ ರೈತ ಸಮುದಾಯಕ್ಕೆ ಎಂದೂ ಅನ್ಯಾಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕ ಬಂದ್ ವಿಚಾರ ಸಂಬಂಧ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆಗಳು, ಕಾಂಗ್ರೆಸ್‌ನವರ ಪಿತೂರಿಯಿಂದ ಧರಣಿ ನಡೆಯುತ್ತಿದೆ. ರೈತ ಮುಖಂಡರನ್ನು ಕರೆಸಿ ಮಾತಾಡುವ ಪ್ರಯತ್ನ ಮಾಡಿದ್ದೆ. ಈ ಕಾಯ್ದೆಗಳಿಂದ ಆಗುವ ಅನುಕೂಲದ ಬಗ್ಗೆ ವಿವರಿಸಿದ್ದೇನೆ. ಆದರೆ, ಅವರು ಪ್ರತಿಭಟನೆ ಮಾಡುವ ಉದ್ದೇಶದಿಂದ ಬಂದಿದ್ದಾರೆ. ನಾನು ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ, ರೈತರ ಪರವಾಗಿ ಇದ್ದೇನೆ. ರೈತರಿಗೆ ಕೆಟ್ಟದ್ದಾಗಲೂ ನಾನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣೆ ಕಾಯ್ದೆಗಳಿಗೆ ತರುತ್ತಿರುವ ತಿದ್ದುಪಡಿಯಿಂದ ರೈತರಿಗೆ ಅನ್ಯಾಯ ಆಗಲ್ಲ. ಈ ವಿಚಾರದಲ್ಲಿ ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನಮ್ಮ ಬೆಳೆ ನಮ್ಮ ಹಕ್ಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಾವು ಬೆಳೆದ ಬೆಳೆಯನ್ನ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಪಿಎಂಸಿಯನ್ನ ಮುಚ್ಚುತ್ತಿಲ್ಲ. ರೈತರು ಬೇಕಾದರೆ ಎಪಿಎಂಸಿಯಲ್ಲೂ ಬೆಳೆ ಮಾರಾಟ ಮಾಡಬಹುದು. ಯಾರು ಬೇಕಾದರೂ ಕೃಷಿ ಮಾಡಬಹುದು. ಕೃಷಿ ಜಮೀನು ನಾಶ ಆಗುವುದಿಲ್ಲ. ನೀರಾವರಿ ಭೂಮಿಯನ್ನು ಕೊಳ್ಳುವವರು ನೀರಾವರಿಗೆ ಬಳಸಬೇಕು ಎಂಬ ಷರುತ್ತು ಹಾಕಿದ್ದೇವೆ. ಎಲ್ಲ ದೃಷ್ಟಿಯನ್ನೂ ಮನಸ್ಸಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಇದು ರೈತರಿಗೂ ಒಳಿತಾಗುತ್ತದೆ. ಕೈಗಾರಿಕೆಗಳಿಗೂ ಅನುಕೂಲ ಆಗುತ್ತದೆ. ರೈತರು ಅನಾವಶ್ಯಕವಾಗಿ ಗೊಂದಲಕ್ಕೊಳಗಾಗಬಾರದು. ಇನ್ನಾರು ತಿಂಗಳು ಅಥವಾ ವರ್ಷ ಬಿಟ್ಟು ನೋಡಿದರೆ ನಿಮಗೆ ಈ ಹೊಸ ತಿದ್ದುಪಡಿ ಕಾಯ್ದೆಯಿಂದ ಆಗುವ ಬದಲಾವಣೆ ಅನುಭವಕ್ಕೆ ಬರುತ್ತದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಾನು ಹಿಂದೆ ಎಪಿಎಂಸಿ ಅಧ್ಯಕ್ಷನಾಗಿದ್ದವನು. ಅಲ್ಲಿ ದಲ್ಲಾಳಿಗಳಿಂದ ರೈತರ ಶೋಷಣೆ ಹೇಗೆ ಆಗುತ್ತೆ ಅಂತ ಗೊತ್ತು. ರೈತ ಎಪಿಎಂಸಿ ಬಿಟ್ಟು ನೇರವಾಗಿ ಮಾರಾಟ ಮಾಡಿದರೆ ಕೇಸ್ ಹಾಕುತ್ತಿದ್ದರು. ಇವತ್ತಿಗೂ ನನ್ನ ಮೇಲೆ ಕೇಸ್ ಇದೆ. ರೈತರಿಗೆ ಹೇಗೆಲ್ಲಾ ಅನ್ಯಾಯ ಆಗುತ್ತೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಎಪಿಎಂಸಿಗೆ ಪೂರ್ಣ ಬಾಗಿಲು ಹಾಕಿಲ್ಲ. ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು. ಆದರೆ, ಮದ್ಯವರ್ತಿಗಳಿಗೆ ಕಡಿವಾಣ ಹಾಕಿದ್ದೇವೆ. ರೈತರು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯನ್ನು ಹೋಗಲಾಡಿಸಿದ್ದೇವೆ. ಎಲ್ಲಾ ಸಾಧಕ ಬಾಧಕಗಳನ್ನ ಚರ್ಚಿಸಿ ಮಸೂದೆ ರೂಪಿಸಿದ್ದೇವೆ. ರೈತರು, ಸಂಘಟನೆಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.

ಈ ಕಾಯ್ದೆಗೆ ತಿದ್ದುಪಡಿ ತರಲು ಕಾಂಗ್ರೆಸ್ ಪಕ್ಷ ಹಿಂದೆಲ್ಲಾ ಪ್ರಯತ್ನ ಮಾಡಿತ್ತು. ಈಗ ಏನೇನೋ ಹೇಳುತ್ತಿದೆ. ಅವರು ಯಾರೋ ದೆಹಲಿಯಿಂದ ಬಂದಿರುವವರಿಗೋಸ್ಕರ ಹೀಗೆಲ್ಲಾ ಮಾಡುತ್ತಿದ್ದಾರೆ. ಸುರ್ಜೆವಾಲ ಒಂದು ವಾರದ ಹಿಂದಷ್ಟೇ ರಾಜ್ಯಕ್ಕೆ ಬಂದಿದ್ದಾರೆ. ಮೊದಲು ಅವರು ಕಾಂಗ್ರೆಸ್ ಪಕ್ಷ ಸಂಘಟಿಸಲಿ. ಆಮೇಲೆ ಬಿಜೆಪಿಯೋ ಮತ್ತೊಂದರ ಬಗ್ಗೆಯೋ ಮಾತನಾಡಲಿ ಎಂದು ನೂತನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನ ಬಿಎಸ್​ವೈ ಟೀಕಿಸಿದ್ದಾರೆ.

ಸರ್ಕಾರ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸಿದ್ದರಾಮಯ್ಯ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಾನು ಇದೇ ಕೃಷಿ ಕಾಯ್ದೆ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಕಾಂಗ್ರೆಸ್​ನವರು ಗೆಲ್ಲಲಿ ನೋಡೋಣ ಎಂದು ಪ್ರತಿಸವಾಲು ಹಾಕಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ರಾಜ್ಯದ ವಿವಿಧ ಕಡೆ ಪ್ರವಾಸ ಮಾಡಿ ರೈತನ್ನು ಭೇಟಿ ಮಾಡುತ್ತೇನೆ. ಕಾಯ್ದೆಯಿಂದ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

Comments are closed.