ಕರ್ನಾಟಕ

ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಸಂದೇಶ; ಮುರುಗೇಶ್ ನಿರಾಣಿ ವಿರುದ್ಧ ದೂರು

Pinterest LinkedIn Tumblr


ಹುಬ್ಬಳ್ಳಿ(ಜು.29): ಹಿಂದೂ ದೇವತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಕಳಿಸಿದ್ದಾರೆ ಎಂದು ಆರೋಪಿಸಿ ಬಿಳಗಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕರ್ನಾಟಕ ಕ್ಷತ್ರಿಯ ಒಕ್ಕೂಟದ ಕಾರ್ಯಕರ್ತರು ಪೊಲೀಸ್ ಕಂಪ್ಲೇಂಟ್ ಮಾಡಿದ್ದಾರೆ. ಮುರುಗೇಶ್ ನಿರಾಣಿ ವಿರುದ್ಧ‌ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮುರುಗೇಶ್ ನಿರಾಣಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಿದ್ದಾರೆ. ಪೂರ್ವಾಪರ ಯೋಚಿಸದೆ ಮನಬಂದಂತೆ ಟೀಕಿಸಿ ಅವಮಾನಿಸಿದ್ದಾರೆ. ಇದರಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ನಿರಾಣಿ ನಡೆ ಸಾಕಷ್ಟು ನೋವನ್ನು ತಂದಿದೆ. ರಾಮನನ್ನು ಅವಮಾನಿಸಿ ಕ್ಷತ್ರಿಯರ ಮನಸ್ಸಿಗೆ ಘಾಸಿಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಕ್ಷತ್ರಿಯ ಒಕ್ಕೂಟದ ಮುಖಂಡರು ಘೋಷಣೆಗಳನ್ನು ಕೂಗಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಹನಮಂತಸಾ ನಿರಂಜನ್, ಬಿಳಗಿ ಶಾಸಕ ಮುರುಗೇಶ ನಿರಾಣಿ ಸನಾತನ ಹಿಂದೂ ಧರ್ಮ ಹಾಗೂ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಯಾಗಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶ ಕಳಿಸಿದ್ದಾರೆ. ಅವರ ನಡೆಯಿಂದ ಹಿಂದೂ ಸಂಸ್ಕೃತಿಯನ್ನು ಪಾಲಿಸುವ ಅದರಲ್ಲೂ ಕ್ಷತ್ರಿಯರಾಗಿರುವ ನಮಗೆ ತುಂಬಾ ನೋವಾಗಿದೆ. ನಮ್ಮ ಸನಾತನ ಧರ್ಮ, ದೇವರುಗಳು, ಕುಲ ಹಾಗೂ ನಮ್ಮ ಪೂರ್ವಜರ ಬಗ್ಗೆ ನಿರಾಣಿಯವರು ಕಳಿಸಿರುವ ವಾಟ್ಸ್‌ಆ್ಯಪ್ ಸಂದೇಶದಿಂದ ನಮ್ಮ ಧಾರ್ಮಿಕ ಭವನೆಗೆ ಧಕ್ಕೆಯಾಗಿದೆ. ನಿರಾಣಿಯವರು ಶಾಸಕರಾಗಿರುವ ದರ್ಪದಲ್ಲಿ ಕಾನೂನು ವ್ಯಾಪ್ತಿ ಮೀರಿ ವರ್ತಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾನ ಮಾಡುತ್ತಿರುವ ಸಂದರ್ಭದಲ್ಲಿ ನಿರಾಣಿಯವರ ಈ ವರ್ತನೆ ಖಂಡನೀಯ. ಅವರನ್ನು ಬಿಜೆಪಿ ಪಕ್ಷದಿಂದಲೂ ಉಚ್ಛಾಟಿಸಬೇಕು ಎಂದು ಹನುಮಂತಸಾ ಬಿರಂಜನ ಬಿಜೆಪಿ ಮುಖಂಡರನ್ನು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ಉಪ‌ನಗರ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ. ಕ್ಷತ್ರಿಯ ಒಕ್ಕೂಟದ ಮುಖಂಡರಾದ ಪ್ರಕಾಶ್ ಬುರಬುರೆ, ರಾಘವೇಂದ್ರ ಕಠಾರೆ ಕೂಡ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.

Comments are closed.