ಬೆಂಗಳೂರು: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತು ಸತ್ಯ. ಈ ಮಾತಿಗೆ ನಿದರ್ಶನವೆಂಬಂತೆ ರಾಜಧಾನಿ ಬೆಂಗಳೂರಿನಲ್ಲಿ ಒಂದು ಘೋರ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮಗಳು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ.
ಕೆ.ಆರ್.ಪುರಂನ ಅಕ್ಷಯನಗರದಲ್ಲಿ ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮೃತಾ(33) ತಾಯಿಯನ್ನೇ ಕೊಲೆ ಮಾಡಿದವಳು. ನಿರ್ಮಲಾ ಕೊಲೆಯಾದ ತಾಯಿ. ಸಾಲದ ವಿಚಾರವಾಗಿ ಮಲಗಿದ್ದ ತಾಯಿಗೆ ಚಾಕು ಇರಿದು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಅಮೃತಾ ಪ್ರೀತಿಗೆ ಮನೆಯಲ್ಲಿ ವಿರೋಧವೂ ಇತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ಅಮೃತಾ ಸಿಂಪೋನಿ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಸಾಲದ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಜಗಳವಾಗಿದೆ. ಬಳಿಕ ಈ ಜಗಳ ದಿನೇ ದಿನೇ ತಾರಕಕ್ಕೇರಿದೆ ಫೆ.1ರಂದು ಅಮೃತಾ ತನ್ನ ತಾಯಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾಳೆ. ಅದರಂತೆ ಮುಂಜಾನೆ ಮಲಗಿದ್ದ ತನ್ನ ತಾಯಿಗೆ ಚಾಕು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟೇ ಅಲ್ಲದೇ, ಅಮೃತಾ ತನ್ನ ತಮ್ಮ ಹರೀಶ್ನನ್ನು ಸಹ ಕೊಲೆ ಮಾಡಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ಹರೀಶ್ ಅಮೃತಾಳನ್ನು ಪ್ರಶ್ನಿಸಿದ್ದಾನೆ. “ನಾನು 15 ಲಕ್ಷ ಸಾಲ ಮಾಡಿದ್ದೀನಿ, ನಾನು ಹೈದರಾಬಾದ್ಗೆ ಹೋದಾಗ ಅದನ್ನು ವಾಪಸ್ ಪಡೆಯಲು ಸಾಲಗಾರರು ನಿಮ್ಮ ಬಳಿ ಬರುತ್ತಾರೆ. ಅದಕ್ಕೆ ಅಮ್ಮನನ್ನು ಕೊಲೆ ಮಾಡಿದ್ದೇನೆ. ನಿನ್ನನ್ನು ಕೊಲ್ಲುತ್ತೇನೆ,” ಎಂದು ಹೇಳಿದ್ದಾಳೆ.
ಆದರೆ ಅಮೃತಾ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು, ಆಕೆಯ ಪ್ರೀತಿಗೆ ಮನೆಯವರ ವಿರೋಧವಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ತಾಯಿ ಮತ್ತು ತಮ್ಮ ಅಮೃತಾ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು, ತಾಯಿಯನ್ನು ಕೊಂದ ಮಗಳು ಪರಾರಿಯಾಗಿದ್ದಾಳೆ. ಈ ಸಂಬಂಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಮೃತಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Comments are closed.