ಕರ್ನಾಟಕ

ಶೃಂಗೇರಿ ಮಠದಲ್ಲಿ ಕೆಲಸ ಮಾಡುವ ಮುತ್ತೈದೆಯರ ಆಶೀರ್ವಾದ ಪಡೆದ ದೇವೇಗೌಡ ದಂಪತಿ

Pinterest LinkedIn Tumblr


ಚಿಕ್ಕಮಗಳೂರು: ಶೃಂಗೇರಿ ಮಠದಲ್ಲಿ ಕೆಲಸ ಮಾಡುವ 50ಕ್ಕೂ ಹೆಚ್ಚು ಮುತ್ತೈದೆಯರಿಂದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಆಶೀರ್ವಾದ ಪಡೆದಿದ್ದಾರೆ.

ಮುತ್ತೈದೆಯರಿಗೆಲ್ಲ ಅರಿಶಿನ-ಕುಂಕುಮ, ಬಳೆ, ಸೀರೆ, ತೆಂಗಿನಕಾಯಿ, ಬಾಳೆಹಣ್ಣು ನೀಡಿ ಆಶೀರ್ವಾದ ಪಡೆದರು. ದೇವೇಗೌಡರ ಪತ್ನಿ ಚನ್ನಮ್ಮ ಒಬ್ಬೊಬ್ಬರಿಗೆ ಅರಿಶಿನ-ಕುಂಕುಮ ನೀಡಿ, ಅಕ್ಷತೆ ಹಾಕಿ ನಮಸ್ಕರಿಸಿದರು. ನಂತರ ದೇವೇಗೌಡರು ಕೂಡ ಮುತ್ತೈದೆಯರು ಕುಳಿತ ಜಾಗಕ್ಕೆ ಬಂದು ನೆಲ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಕಳೆದ ಐದು ದಿನಗಳಿಂದ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಿ ಸಹಸ್ರ ಚಂಡಿಕಾ ಯಾಗ ನಡೆಸುತ್ತಿರುವ ದೇವೇಗೌಡ ದಂಪತಿ ಐದು ದಿನಗಳಿಂದಲೂ ಬೆಳಗ್ಗೆ ಸಂಜೆ ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ. 10 ಜನ ಋತ್ವಿಜರು, 108 ಪುರೋಹಿತರು ಬೆಳಗ್ಗೆ ಸಂಜೆ ಯಾಗದ ವಿಶೇಷ ಪೂಜೆ ಮಾಡುತ್ತಿದ್ದಾರೆ. ಐದು ದಿನದ ಯಾಗ ನಾಳೆಗೆ ಪೂರ್ಣಾಹುತಿಗೊಳ್ಳಲಿದೆ. ಆದರೆ ಇಂದೇ ಶ್ರೇಷ್ಠ ದಿನವಾಗಿದೆ. ಹಾಗಾಗಿ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಇಂದಿನ ಪೂಜೆಯಲ್ಲಿ ಭಾಗಿಯಾದರು. ಇಂದಿನ ಪೂಜೆಗೆ ಶೃಂಗೇರಿ ಮಠದ ಕಿರಿಯ ಗುರುಗಳಾದ ವಿಧುಶೇಖರ ಶ್ರೀಗಳು ಸಹ ಭಾಗಿಯಾದರು. ಈ ವೇಳೆ ದೇವೇಗೌಡ ದಂಪತಿ ಗುರುಗಳ ಆಶೀರ್ವಾದ ಪಡೆದರು.

ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲೆಯ ಕೊಪ್ಪ ತಾಲೂಕಿನ ಜೆಡಿಎಸ್ ಮುಖಂಡ ಗುಡ್ಡೆತೋಟದ ರಂಗನಾಥ್ ಅವರ ಹೋಂಸ್ಟೇನಲ್ಲಿ ಇಂದು ತಂಗಿದ್ದು, ನಾಳೆ ಬೆಳಗ್ಗೆ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಲಿದ್ದಾರೆ. ಯಾಗಕ್ಕೆ ಮಾಜಿ ಸಚಿವ ರೇವಣ್ಣ ಸಹ ಬಂದು ಹೋಗಿದ್ದಾರೆ. ನಾಳೆ ದೇವೇಗೌಡ, ಚನ್ನಮ್ಮ ಹಾಗೂ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಯಾಗ ಪೂರ್ಣಾಹುತಿಯಾಗಲಿದೆ. ದೇವೇಗೌಡರು ಕುಟುಂಬದ ಶ್ರೇಯೋಭಿವೃದ್ಧಿಗೆ ಪೂಜೆ ಅಂದ್ರೆ, ಕುಮಾರಸ್ವಾಮಿಯವರು ಮನ:ಶಾಂತಿಗೆ ಅಂದಿದ್ದಾರೆ. ಆದರೆ ಈ ಯಾಗ ರಾಜಮಹಾರಾಜರ ಕಾಲದಲ್ಲಿ ಕುಟುಂಬ ಹಾಗೂ ಸೈನ್ಯ ಶಕ್ತಿ ಹೆಚ್ಚಲು ನಡೆಸಲಾಗುತಿತ್ತು. ಹಾಗಾಗಿ ದೇವೇಗೌಡರ ಈ ಯಾಗ ಜೆಡಿಎಸ್‍ಗೆ ಶಕ್ತಿ ತುಂಬಲು ಎಂದೇ ವಿಶ್ಲೇಷಿಸಲಾಗುತ್ತಿದೆ.

Comments are closed.