ಕರ್ನಾಟಕ

ತನ್ವೀರ್ ಸೇಠ್ ಹಲ್ಲೆಯ ಹಿಂದಿತ್ತು ಈ ಕಾರಣ!

Pinterest LinkedIn Tumblr


ಮೈಸೂರು (ನ. 19): ಚಾಕುವಿನಿಂದ ಇರಿದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದ ಆರೋಪಿ ಫರಾನ್ ಈಗ ಪೊಲೀಸರ ವಶದಲ್ಲಿದ್ದಾನೆ. ನಿನ್ನೆ ರಾತ್ರಿ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ 12 ದಿನಗಳ ಕಾಲ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಕೊಲೆ ಯತ್ನಕ್ಕೆ ಕಾರಣವೇನೆಂಬ ಬಗ್ಗೆ ಇನ್ನೂ ಫರಾನ್ ಬಾಯಿಬಿಟ್ಟಿಲ್ಲ.

ವಿಚಾರಣೆಗಾಗಿ ಆರೋಪಿ ಫರಾನ್ ಪರಿಚಯಸ್ಥರನ್ನು ಪೊಲೀಸರು ಠಾಣೆಗೆ ಕರೆಸಿದ್ದರು. ಈ ವೇಳೆ ಅಚ್ಚರಿಯ ಮಾಹಿತಿಗಳು ಬೆಳಕಿಗೆ ಬಂದಿವೆ. ಗಣ್ಯರನ್ನು ಕೊಲೆ ಮಾಡಿ ಹೆಸರು ಮಾಡುವ ಗೀಳು ಹೊಂದಿದ್ದ ಫರಾನ್ ಅದೇ ಕಾರಣಕ್ಕೆ ತನ್ವೀರ್ ಸೇಠ್ ಮೇಲೂ ಹಲ್ಲೆ ನಡೆಸಿರಬಹುದು ಎಂದು ಆತನ ಗೆಳೆಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಆಪ್ತರು, ಗೆಳೆಯರೊಂದಿಗೆ ಹೇಳಿಕೊಂಡಿದ್ದ ಫರಾನ್, ಗಣ್ಯ ವ್ಯಕ್ತಿಗಳನ್ನು ಕೊಲೆ ಮಾಡಿದರೆ ಎಲ್ಲರಿಗೂ ತಾನು ಪರಿಚಿತನಾಗುತ್ತೇನೆ ಎಂದು ಹೇಳಿಕೊಂಡಿದ್ದ ಎಂದು ಆತನ ಆಪ್ತರು ಬಹಿರಂಗಪಡಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣದ ತನಿಖೆ ಚುರುಕುಗೊಂಡಿದೆ. ಫರಾನ್ ಜೊತೆ ಗುರುತಿಸಿಕೊಂಡಿದ್ದವರ ವಿಚಾರಣೆ ನಡೆಸಲಾಗುತ್ತಿದೆ. ಫರಾನ್​ಗೆ ಇತ್ತೀಚೆಗೆ ಹೆಸರು ಮಾಡುವ ಗೀಳು ಹೆಚ್ಚಾಗಿತ್ತು. ತಾನು ಫೇಮಸ್ ಆಗಬೇಕೆಂಬ ಕಾರಣಕ್ಕೆ ವಿಐಪಿ ಒಬ್ಬರನ್ನು ಕೊಲೆ ಮಾಡುತ್ತೇನೆ ಎಂದು ಆತ ಆಪ್ತರ ಬಳಿ ಹೇಳಿಕೊಂಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಆ ವಿಐಪಿ ಯಾರು, ಯಾವಾಗ ಕೊಲೆ ಮಾಡುತ್ತಾನೆ ಎಂಬ ಬಗ್ಗೆ ಫರಾನ್ ಮಾಹಿತಿ ನೀಡಿರಲಿಲ್ಲ. ಆತ ಸುಮ್ಮನೆ ತಮಾಷೆಗೆ ಹಾಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದ ತಮಗೆ ಈಗ ದಿಗ್ಭ್ರಮೆಯಾಗಿದೆ ಎಂದು ವಿಚಾರಣೆಗೆ ಬಂದಿದ್ದ ಗೆಳೆಯರ ಸ್ಫೋಟಕ ಮಾಹಿತಿ ನ್ಯೂಸ್ 18ಗೆ ಪೊಲೀಸ್ ಮೂಲಗಳಿಂದ ಸಿಕ್ಕಿದೆ.

ಆರೋಪಿ ಫರಾನ್ ಕುಟುಂಬಸ್ಥರು ಈಗಾಗಲೇ ಪರಾರಿಯಾಗಿದ್ದಾರೆ. ಫರಾನ್​ನನ್ನು ಪೊಲೀಸರು ಬಂಧಿಸಿದ ಬಳಿಕ ತಮ್ಮನ್ನೂ ವಿಚಾರಣೆ ನಡೆಸುವ ಭಯದಿಂದ ಆತನ ಮನೆಯವರೆಲ್ಲ ಪರಾರಿಯಾಗಿದ್ದಾರೆ. ಅವರನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಭಾನುವಾರ ರಾತ್ರಿ ಆಗಿದ್ದೇನು?:
ಭಾನುವಾರ ರಾತ್ರಿ ಸುಮಾರು 11.30 ಗಂಟೆ ಸಂದರ್ಭದಲ್ಲಿ ಮೈಸೂರಿನಲ್ಲಿ ಘಟನೆ ನಡೆದಿದೆ. ತನ್ವೀರ್​ ಆಪ್ತರ ಮದುವೆಯಲ್ಲಿ ಭಾಗಿಯಾಗಿದ್ದರು. ಬನ್ನಿಮಂಟಪದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಕೂಡ ಇದ್ದರು. ಈ ವೇಳೆ ಫರಾನ್ ( 24 ) ಎಂಬ ಯುವಕ ತನ್ವೀರ್​ ಕತ್ತಿಗೆ ಚಾಕು ಹಾಕಿದ್ದಾನೆ. ಗಾಯಗೊಂಡ ತನ್ವೀರ್ ಸೇಠ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಫರಾನ್​​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.