ಕರ್ನಾಟಕ

ಹಾಡಹಗಲೇ ಶಾಲೆ ಆವರಣದಲ್ಲಿ ವ್ಯಾಪಾರಿಯ ಹತ್ಯೆ

Pinterest LinkedIn Tumblr


ತುಮಕೂರು: ನಗರದಲ್ಲಿ ರೌಡಿಗಳ ಉಪಟಳ ಮುಂದುವರಿದಿದ್ದು, ಹಾಡಹಗಲೇ ಇಟ್ಟಿಗೆ ವ್ಯಾಪಾರಿಯೊಬ್ಬ ನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸಿರಾ ಗೇಟ್‌ನ ನಾಗಣ್ಣನಪಾಳ್ಯ ನಿವಾಸಿ ಮಹಂತೇಶ್‌ (26) ಕೊಲೆಯಾದ ವ್ಯಕ್ತಿ.

ಸ್ನೇಹಿತ ಮಂಜುನಾಥ್‌ ಎಂಬುವ ರೊಂದಿಗೆ ಗುರುವಾರ ಸಂಜೆ 4.30ರ ಸಮಯದಲ್ಲಿ ಮನೆ ಸಮೀಪದ ಅನಿಕೇತನ ಶಾಲೆಗೆ ಮಗಳನ್ನು ಕರೆತರಲು ತೆರಳಿದ್ದ ವೇಳೆ ಮಹಂತೇಶ್‌ ಮೇಲೆ ಗುಂಪೊಂದು ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿದೆ. ಬೈಕ್‌ನಲ್ಲಿ ಕುಳಿತ್ತಿದ್ದ ಮಹಂತೇಶ್‌ ನೆಲಕ್ಕುರುಳುತ್ತಿದ್ದಂತೆ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಮಹಂತೇಶ್‌ ಜತೆಗೆ ಬೈಕ್‌ನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸ್ನೇಹಿತ ಇಟ್ಟಿಗೆ ವ್ಯಾಪಾರಿ ಮಂಜುನಾಥ್‌ ಎಂಬುವರಿಗೂ ಮಚ್ಚಿನೇಟು ಬಿದ್ದಿದೆ. ಕೂಡಲೇ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆತರಲಾಯಿತಾದರೂ ಮಹಂತೇಶ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಜುನಾಥ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಾರ ಕೈವಾಡ: ಮಹಂತೇಶ್‌ ಕೊಲೆಯ ಹಿಂದೆ ರೌಡಿಶೀಟರ್‌ ರೋಹಿತ್‌ನ ಹೆಸರು ಕೇಳಿಬಂದಿದೆ. ಹಟ್ಟಿಮಂಜನ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದ ರೋಹಿತ್‌ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮತ್ತೊಂದು ಕೇಸ್‌ನಲ್ಲಿ ಮಂಗಳವಾರವಷ್ಟೇ ಪೊಲೀಸರು ಆತನನ್ನು ಪುನಃ ಜೈಲಿಗೆ ಕಳಿಸಿದ್ದರು. ಅದರ ಬೆನ್ನಲ್ಲೇ ಮಹಂತೇಶ್‌ನ ಕೊಲೆ ನಡೆದಿದೆ. ರೋಹಿತ್‌ನ ಶಿಷ್ಯರು ಈ ಕೊಲೆ ಮಾಡಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹೆಚ್ಚಿನ ತನಿಖೆ ನಡೆಯಬೇಕಿದೆ.

ಕೊಲೆಗೆ ಏನು ಕಾರಣ?: ಮಹಂತೇಶ್‌ನನ್ನು ಹತ್ಯೆ ಮಾಡಿದ್ದಾರೆಂದು ಶಂಕಿಸಲಾದ ರೋಹಿತ್‌ನ ಶಿಷ್ಯರು ಯಾರು ಕೂಡಾ ರೌಡಿ ಶೀಟರ್‌ಗಳಲ್ಲ. ಹತ್ಯೆಯಾಗಿರುವ ಮಹಂತೇಶ್‌ ಕೂಡ ರೌಡಿಶೀಟರ್‌ ಅಲ್ಲ. ಇವರೆಲ್ಲರೂ ಒಟ್ಟಿಗೆ ಸೇರಿ ಮದ್ಯಪಾನ ಮಾಡುತ್ತಿದ್ದ ಸ್ನೇಹಿತರು ಎಂದು ತಿಳಿದುಬಂದಿದೆ. ಆದರೆ ರೌಡಿಶೀಟರ್‌ ರೋಹಿತ್‌ನ ಶಿಷ್ಯ ಚಿನ್ನು ಎಂಬಾತನೊಂದಿಗೆ ಮಹಂತೇಶ್‌ಗೆ ವೈರತ್ವವಿತ್ತು. ಅಲ್ಲದೇ ರೋಹಿತ್‌ನನ್ನು ಬಂಧಿಸಲು ಆತನ ಅಡಗುತಾಣದ ಬಗ್ಗೆ ಪೊಲೀಸರಿಗೆ ಮಹಂತೇಶ್‌ ಸುಳಿವು ನೀಡಿದ್ದ ಎಂದು ಶಂಕಿಸಿ ರೋಹಿತ್‌ನ ಶಿಷ್ಯರು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಕೊಲೆಗೆ ನೈಜ ಕಾರಣ ತಿಳಿದುಬಂದಿಲ್ಲ.

ನಿಲ್ಲದ ಉಪಟಳ: ಕಳೆದೊಂದು ವಾರದಿಂದ ನಗರದಲ್ಲಿ ರೌಡಿಗಳ ಉಪಟಳ ಹೆಚ್ಚಾಗುತ್ತಿದೆ. ನ.1ರಂದು ರೌಡಿಶೀಟರ್‌ ಚಟ್ಟ ಮೋಹನ್‌ ಕುಮಾರನ ಕೊಲೆಯಾಗಿತ್ತು. ಬೆಳಗುಂಬ ಬಸ್‌ ನಿಲ್ದಾಣದಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆತನನ್ನು ಹತ್ಯೆಗೈಯಲಾಗಿತ್ತು. ಮರುದಿನ ನ.2ರಂದು ಕ್ಯಾತ್ಸಂದ್ರ ಪೊಲೀಸರು ಈ ಕೊಲೆ ಆರೋಪಿ ಟೆಂಪರ್‌ ರಾಜನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದರು. ಅದೇ ದಿನ ತಡರಾತ್ರಿ ನಗರದ ರೈಲು ನಿಲ್ದಾಣದ ಮಹಾವೀರ್‌ ಕಲ್ಯಾಣ ಮಂಟಪದಲ್ಲಿ ರೌಡಿಶೀಟರ್‌ ಹಟ್ಟಿ ಮಂಜನ ಶಿಷ್ಯರ ನಡುವೆ ಗ್ಯಾಂಗ್‌ವಾರ್‌ ಸಂಭವಿಸಿತ್ತು. ಅದರ ಬೆನ್ನಲ್ಲೇ ಪೊಲೀಸರು ರೌಡಿಶೀಟರ್‌ಗಳ ಮನೆಗೆ ಭೇಟಿ ನೀಡಿ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡಿ ಬಂದಿದ್ದರು. ಇಷ್ಟಾದರೂ ರೌಡಿಗಳ ಉಪಟಳ ಮುಂದು ವರಿದಿದ್ದು, ಮಹಂತೇಶ್‌ನ ಹತ್ಯೆಯಾಗಿದೆ. ನಗರದಲ್ಲಿ ರೌಡಿಗಳ ಉಪಟಣ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ.

Comments are closed.