ಬೆಂಗಳೂರು (ಸೆ. 24): ಆಸ್ತಿ ವಿಷಯಕ್ಕೆ ಉದ್ಯಾನನಗರಿ ಬೆಂಗಳೂರಿನ ಉದ್ಯಮಿ ಪ್ರಭಾಕರ ರೆಡ್ಡಿ ಅವರನ್ನು ಪ್ರೇಯಸಿಯೇ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಕಳೆದ ಶುಕ್ರವಾರ ನೈಸ್ ರೋಡ್ನಿಂದ ಎಲೆಕ್ಟ್ರಾನಿಕ್ ಸಿಟಿಯ ಕಡೆಗೆ ತನ್ನ ಪ್ರೇಯಸಿಯೊಂದಿಗೆ ಕಾರಿನಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಉದ್ಯಮಿ ಪ್ರಭಾಕರ್ ರೆಡ್ಡಿ ಮತ್ತು ಪ್ರೇಯಸಿ ಪವಿತ್ರಾ ನಡುವೆ ಕಾರಿನಲ್ಲೇ ವಾಗ್ವಾದ ಶುರುವಾಗಿದೆ. ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಪವಿತ್ರಾ ಜಗಳ ಮಾಡಿದ್ದಾರೆ. ಅದಕ್ಕೆ ಪ್ರಭಾಕರ್ ರೆಡ್ಡಿ ಒಪ್ಪದಿದ್ದಾಗ ಕೋಪಗೊಂಡ ಪವಿತ್ರಾ ಕಾರಿನ ಸೀಟ್ಬೆಲ್ಟ್ನಿಂದ ಅವರ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದಾಳೆ.
ಬಹಳ ದಿನಗಳಿಂದ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪವಿತ್ರಾ ಕೇಳುತ್ತಿದ್ದಳು. ಇದೇ ವಿಷಯವನ್ನು ಮಾತನಾಡಲು ಪ್ರಭಾಕರ್ ರೆಡ್ಡಿ ಪವಿತ್ರಾಳನ್ನು ಬರಲು ಹೇಳಿದ್ದರು. ಆಸ್ತಿಯನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಭಾಕರ್ ರೆಡ್ಡಿಯನ್ನು ಸೀಟ್ಬೆಲ್ಟ್ನಿಂದ ಕೊಲ್ಲಲು ಪ್ರಯತ್ನಿಸಿದಾಗ ಆಕೆಯಿಂದ ಬಿಡಿಸಿಕೊಂಡ ರೆಡ್ಡಿ ಜೋರಾಗಿ ಕಿರುಚಿಕೊಂಡಿದ್ದರು. ಕಾರಿನ ಕಿಟಕಿ ಗ್ಲಾಸ್ ಇಳಿದಿದ್ದರಿಂದ ಪ್ರಭಾಕರ್ ರೆಡ್ಡಿಯ ಕಿರುಚಾಟ ಕೇಳಿ ಜನರು ಧಾವಿಸಿ ಬಂದಾಗ ಪವಿತ್ರಾ ಓಡಿಹೋಗಿದ್ದಾಳೆ.
ಪವಿತ್ರಾಳನ್ನು 2ನೇ ಪತ್ನಿ ಎಂದು ಹೇಳಿಕೊಂಡಿದ್ದ ಪ್ರಭಾಕರ್ ರೆಡ್ಡಿ ಆಕೆಯೊಂದಿಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಪವಿತ್ರಾಳಿಗಾಗಿ ಆರ್ಆರ್ ನಗರದಲ್ಲಿ ಐಷಾರಾಮಿ ಮನೆಯನ್ನೂ ಕಟ್ಟಿಸಿಕೊಟ್ಟಿದ್ದರು. ತಮ್ಮ ಮೇಲಾದ ಹಲ್ಲೆಯ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಪ್ರಭಾಕರ್ ರೆಡ್ಡಿ ದೂರು ನೀಡಿದ್ದಾರೆ. ಭೂಕಬಳಿಕೆ , ವಂಚನೆ ಹಿನ್ನಲೆ ಪ್ರಭಾಕರ್ ರೆಡ್ಡಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ರೆಡ್ಡಿಯ ಪ್ರೇಯಸಿ ಪವಿತ್ರಾ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಳೆಂದು ಆರ್ಆರ್ ನಗರ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಸದ್ಯಕ್ಕೆ ಪೊಲೀಸರು ನಾಪತ್ತೆಯಾಗಿರುವ ಪವಿತ್ರಾಳ ಹುಡುಕಾಟ ನಡೆಸಿದ್ದಾರೆ.
Comments are closed.